Thursday, December 21, 2017

ನಿಜವಾಗಿಯೂ ಸಮ್ಮೇಳನಗಳಲ್ಲಿ ಗೋಷ್ಠಿ ನಡೆಸುವ ಉದ್ದೇಶವೇನು?

ಅನೇಕ ಕನ್ನಡ ತುಳು ಕಾರ್ಯಕ್ರಮಗಳಿಗೆ, ಸಮ್ಮೇಳನಗಳಿಗೆ, ಭಾಗವಹಿಸುವುದು ನನ್ನ ಹವ್ಯಾಸದ ಒಂದು ಭಾಗ.ಕಳೆದ ಆದಿತ್ಯವಾರ ಬೆಂಗಳೂರು ತುಳುಕೂಟ ವತಿಯಿಂದ ವಿಜಯನಗರದ ಅತ್ತಿಗುಪ್ಪೆ ಭಂಟರ ಸಂಘದ ಆವರಣದಲ್ಲಿ ತುಳುನಾಡ ಉತ್ಸವ 2017 ಹಾಗೂ ತುಳು ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನದಲ್ಲಿ ಅನೇಕ ಗೋಷ್ಠಿಗಳು ನಡೆದಿದ್ದು, ವಿದ್ವಾಂಸರ ಮೊದಲ ಗೋಷ್ಠಿ ಹೆಚ್ಚು ಮಾಹಿತಿ ಮತ್ತು ಚಿಂತನೆಯೊಂದಿಗೆ ಉಪಯುಕ್ತವಾಗಿತ್ತು.ಆ ಬಳಿಕ ಸಮಯದ ಕೊರತೆಯನ್ನು ಸರಿ ಹೊಂದಿಸಲು ಮಹಿಳಾ ಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಒಂದೇ ವೇದಿಕೆಯಲ್ಲಿ ಮಾಡಿದರು. ಆದ್ರೆ ಆ ಬಳಿಕ ಮಹಿಳಾ ಗೋಷ್ಠಿ ನಡೆದಿದ್ದು ಅದರಲ್ಲಿ ಯುವ ವಾಗ್ಮಿ ಸಹನ ಕುಂದಾರ್ ಮಂಡಿಸಿದ ತುಳು ವಿಕಿಪೀಡಿಯಾ ಕುರಿತ ವಿಚಾರ ಶೂನ್ಯವಾಗಿತ್ತು.
ಭಾಷಣದ ಆರಂಭದಲ್ಲೇ ಈ ವಿಷಯ ನನಗೆ ಯಾಕೆ ಕೊಟ್ಟರೆಂದು ತಿಳಿಯುತ್ತಿಲ್ಲ ಎನ್ನುತ್ತಾ ಮಾತು ಆರಂಭಿಸಿದ ಅವರು ತುಳುನಾಡಿನ ದೈವರಾಧನೆ ಕುರಿತ ನುಡಿಗಟ್ಟುಗಳನ್ನು ನಿರಂತರ ಹೇಳಲು ಪ್ರಾರಂಭಿಸಿದರು. ಗೋಷ್ಠಿಯಲ್ಲಿ ನೀಡಿರುವ ವಿಷಯದ ಕುರಿತು ಮಾತು ಆರಂಭಿಸಿದ ಕಾರಣಕ್ಕಾಗಿ ಸಭಾಧ್ಯಕ್ಷತೆ ವಹಿಸಿದ್ದ ಡಾ. ಇಂದಿರಾ ಹೆಗ್ಗಡೆ ವಿಷಯದ ಕುರಿತು ಮಾತನಾಡುವಂತೆ ಸೂಚಿಸಿದ್ದರು. ವೇದಿಕೆಯಲ್ಲಿಯೇ ಸಹಾನ ಅವರು ಸಭಾಧ್ಯಕ್ಶರ ಮಾತು ಲೆಕ್ಕಿಸದೆ ಅಸಹನೆಯಿಂದ ಮತ್ತೆ ಬಂಧುಲೇ… ಎನ್ನುತ್ತಾ ದೈವದ ನುಡಿಗಟ್ಟುಗಳನ್ನು ಸ್ಪಟಿಸಿದರು.ಜೊತೆಗೆ ಫೇಸುಬುಕ್ ಸುದ್ದಿಗಳತ್ತ ವಿಷಯಾಂತರ ಮಾಡಿದರು. ಕಾರ್ಯಕ್ರಮ ಆಯೋಜಕರ ಗಡಿಬಿಡಿಯೊ ಅಥವಾ ವಿಷಯವನ್ನು ಒಪ್ಪಿಕೊಂಡವರ ಅನಿವಾರ್ಯತೆಯೋ ತಿಳಿಯದು, ರಾಜಧಾನಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿನ ಗೋಷ್ಠಿಯ ಉದ್ದೇಶ ಅರ್ಥವಾಗದೆ ಹೋಯ್ತು. ಕಾರ್ಯಕ್ರಮ ಆಯೋಜಕರು ಯಾರು ಯಾವ ವಿಷಯ ಮಾತನಾಡಿದ್ರೆ ಒಳ್ಳೆಯದು ಎಂಬುದರ ಬಗ್ಗೆ ಯೋಚಿಸಿದ್ದರೆ ಒಳ್ಳೆಯದಿತ್ತು.

ವಿಷಯದ ಕುರಿತ ಪೂರ್ಣ ಪ್ರಮಾಣದ ಅಂಶಗಳನ್ನು ಜನ ನಿರೀಕ್ಷೆ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರಬೇಕಾದ ಸಂಗತಿ. ವಿಷಯದ ಮೇಲೆ ಪ್ರಭುತ್ವ ಇಲ್ಲದ ಮತ್ತು ಅಸಮರ್ಪಕ ಮಾಹಿತಿ ಹೊಂದಿರುವವರಲ್ಲಿ ವಿಷಯ ಮಂಡನೆ ಮಾಡಿಸುವುದು ತಪ್ಪು ಎಂಬುದು ನನ್ನ ನಿಲುವು. ಹಾಗೆಂದು ಸಹಾನ ಅವರು ವಿವೇಚನೆ ಇಲ್ಲದೇ ಮಾತಾಡಿದರು ಎಂದಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಪೂರ್ಣ ಮಾಹಿತಿ ಯಾರೂ ನೀಡಿದರೂ ಅದನ್ನು ಪ್ರಶ್ನಿಸಬಹುದು.ಮೊನ್ನೆಯ ಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಅವಕಾಶ ಇಲ್ಲದ ಕಾರಣಕ್ಕಾಗಿ ಇಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವೆ. ಸಹಾನ ಅವರು ಪ್ರತಿಭಾವಂತರೂ ಮತ್ತು ಯುವ ವಾಗ್ಮಿಯಾಗಿ ಗುರುತಿಸಿಕೊಂಡಿರುವುದಕ್ಕೆ ನನಗೂ ಹೆಮ್ಮೆ ಇದೆ. ಆದರೆ ಸಭಾಧ್ಯಕ್ಷರ ಮಾತಿಗೆ ಕೋಪಗೊಂಡು ವೇದಿಕೆಯಲ್ಲಿಯೇ ಗೊಣಗಿದ್ದು ಯಾಕೋ ನನಗೆ ವಯಕ್ತಿಕವಾಗಿ ಸರಿ ಕಾಣಲಿಲ್ಲ. ವಿಷಯದ ಬಗ್ಗೆ ತಿಳಿದುಕೊಳ್ಳಲು ವೇದಿಕೆ ಮುಂಭಾಗದಲ್ಲಿ ಕೂತಿದ್ದ ನನಗೆ ಗೊಂದಲವಾಯಿತು ಮೇಧಾವಿಗಳು ಇರಲಿ, ಯುವ ವಿದ್ವಾಂಸರು,ಪ್ರತಿಭಾವಂತರೂ ಯಾರಾದರೂ ಇರಲಿ ವೇದಿಕೆಯಲ್ಲಿ ಶಿಷ್ಟಚಾರ ಪಾಲಿಸಿದರೆ ಕಾರ್ಯಕ್ರಮ ಚೊಕ್ಕವಾಗುತ್ತದೆ.ನೋಡುಗರ ಹೃದಯ ಗೆಲ್ಲುತ್ತದೆ. ವಿಕಿಪೀಡಿಯಾ ಕುರಿತು ನಿರಂತರ ಪ್ರಾಯೋಗಿಕ ಕೆಲಸಗಳನ್ನು ಮಾಡುವ ಪರಿಣತರಿಗೆ ವೇದಿಕೆ ನೀಡಿದ್ದರೆ ಒಳ್ಳೆಯದಿತ್ತು ಎಂಬುದು ನನ್ನ ಅಭಿಪ್ರಾಯ. ವಿಕೀಪಿಡಿಯಾದಲ್ಲಿ ನಾನು ಕೆಲವು ಬರಹಗಳನ್ನು ಬರೆದಿದ್ದೆನೆ ಮತ್ತು ಕೆಲವು ಕಾರ್ಯಗಾರಗಳಲ್ಲಿ ಭಾಗವಹಿಸಿರುವೆ. ನನ್ನ ಬಹರದಿಂದ ಕೆಲವು ಹಿರಿಯರಿಗೆ,ಕಿರಿಯರಿಗೆ ಬೇಸರವಾಗಬಹುದು ಆದರೂ ನನ್ನ ಅಭಿಪ್ರಾಯವನ್ನು ಇಲ್ಲಿ ತಿಳಿಸಿರುವೆ ಅಷ್ಟೆ.
ವಿ.ಕೆ ಕಡಬ

Thursday, June 22, 2017

ಗೋಂಕುರು ಕಪ್ಪೆ ಮತ್ತು ಪನಿಕಪ್ಪೆಗಳ ಮಳೆಗಾಲದ ಸಂಗೀತ ಸಮ್ಮೇಳನ!

VK KADABA:-
"ಬೀಲ ಉದುರಂದೆ ಕಪ್ಪೆ ಆವಂದ್" (ಬಾಲ ಉದುರದೆ ಕಪ್ಪೆ ಆಗುವುದಿಲ್ಲ) ಇದು ತುಳುವರ ಒಂದು ಗಾದೆಯಾಗಿದೆ .ಕಪ್ಪೆ ಕರ ಕರ ತುಪ್ಪ ಜಲಿ ಜಲಿ  ಹಾಡು ಈಗ ನೆನಪಾಗುತ್ತಿದೆ. ಮಳೆಗಾಲ ಆರಂಭವಾಗಿದ್ದೇ ತಡ ಕಪ್ಪೆಗಳ ಆರ್ಭಟ ಬಾರಿ ಜೋರು ಶುರುವಾಗಿದೆ.  ಹಗಲಿನಲ್ಲಿ ದಮ್ ತೆಗೆಯದ ಕಪ್ಪೆಗಳು ಸಾಯಂಕಲ ಆಗುತ್ತಿರುವಾಗಲೇ ಅಪರೂಪಕ್ಕೆ ಒಂದೊಂದು ಸದ್ದು ಮಾಡಲು ಶುರು ಮಾಡುತ್ತವೆ. ರಾತ್ರಿ ಆದ ಮೇಲೆ ಗುಂಪಿನಲ್ಲಿ ಗೋವಿಂದ ಎನ್ನುವ ಹಾಗೇ  ಕಪ್ಪೆಗಳ ಬೊಬ್ಬೆಯಲ್ಲಿ ಇತರ ಕೀಟಗಳ ಸದ್ದು ಶೂನ್ಯ!  ನಮ್ಮ ಊರಿನಲ್ಲಿ ದೊಡ್ಡ ಕಪ್ಪೆಗೆ ಗೊಂಕುರು ಕಪ್ಪೆ ಅಥವಾ ಡೊಂಕುರು ಕಪ್ಪೆ ಎಂದು ಕರೆಯುತ್ತಾರೆ. ಸಣ್ಣ ಕಪ್ಪೆಗಳಿಗೆ ಪನಿಕಪ್ಪೆ ಎಂದು ಹೆಸರು.(ನಿಮ್ಮೂರಿನಲ್ಲಿ ಬೇರೆ ಹೆಸರು ಇರಲೂಬಹುದು)
 ಚಿತ್ರ ಕೃಪೆ:- ಸಿಂಚನಾ ಶ್ಯಾಂ
ಬಿಡದೆ ಸುರಿವ ಮಳೆಗೆ ಕಂದು ಬಣ್ಣದ ಕಪ್ಪೆಗಳು ಮನೆಯ ಮೂಲೆಯಲ್ಲಿ ಸೇರಿಕೊಂಡು ಸದ್ದು ಮಾಡಿದ್ದೂ ಇದೆ. ನನಗೆ ಕಪ್ಪೆಯನ್ನು ಬರೀ ಕೈಯಲ್ಲಿ ಹಿಡಿಯುವುದೆಂದರೆ ಒಂದು ರೀತಿಯ ಭಯ .ಬಟ್ಟೆ ತುಂಡು ಉಪಯೋಗಿಸಿ ಕಪ್ಪೆ ಹಿಡಿದು ಮನೆಯ ಹೋರಗಡೆ ಎಷ್ಟೋ ಸಲ ಬಿಸಾಡಿದ್ದೆನೆ. ಪ್ರತಿ ಸಲ ಮಳೆಗಾಲದಲ್ಲಿ  ಮನೆ ಪಕ್ಕದ ತೋಡಿನಲ್ಲಿ ಮೀನು ಹಿಡಿಯಲು (ಉಬೇರ್ ) ಹೋಗುತ್ತಿದ್ದೆವು. ಆಗ ಕಪ್ಪೆಗಳ ಮೊಟ್ಟೆಗಳು ಗೊಂಚಿಲು ರೂಪದಲ್ಲಿ ನೋಡಲು ಸಿಗುತ್ತಿತ್ತು. ಕಪ್ಪೆ ಮರಿಗಳನ್ನು ನಮ್ಮ ಕಡೆ “ತೊಂದೆ” ಎಂದು ಕರೆಯುತ್ತಾರೆ. ಗ್ರಾಮೀಣ ಭಾಗವಾದ ನನ್ನೂರಿನಲ್ಲಿ ಗದ್ದೆ,ತೋಟದ ಪರಿಸರ ಆಗಿರುವುದರಿಂದ ದೊಡ್ಡ ಕಪ್ಪೆಗಳು ಹಸಿರು ಹುಲ್ಲಿನ ಎಡೆಯಲ್ಲಿ ಅವಿತುಕೊಂಡಿರುತ್ತದೆ. ನಾವು ಅದರ ಸಮೀಪ ತಲುಪುವುದು ಗೊತ್ತಾದಾಗ ಒಮ್ಮೆಲೆ ಬೇರೆ ಕಡೆ ಜಂಪ್ ಹೊಡೆಯುತ್ತದೆ.  ತೋಟದಲ್ಲಿರುವ ಕಪ್ಪೆಯನ್ನು ಹಿಡಿಯುವ ಸಾಹಸ ಮಾಡುವುದಿಲ್ಲ ಮತ್ತು ಅದು ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ.  ಕಪ್ಪೆ ಹಿಡಿದಾಗ ಅದರ ಮೂತ್ರ ಕಣ್ಣಿಗೆ ತಾಗಿದರೆ ಕಣ್ಣು ಹೋಗುತ್ತದೆ ಎಂದು ನನ್ನ ಮನೆಯಲ್ಲಿ ಹೇಳುತ್ತಿದ್ದರು. ಕಪ್ಪೆಗಳ ಬಗ್ಗೆ ಒಂದು ರೀತಿಯ ಭಯ ಈಗಲೂ ಇದೆ . “ಕಪ್ಪೆನ್ ಕೆರ್ಂಡ ಅಪ್ಪೆನ್ ಕೆರಿಲೆಕ್ಕ” ಎಂದು ಅಜ್ಜಿ ಆಗಾಗ ಹೇಳುತ್ತಿದ್ದರು. ನಮ್ಮ ಮನೆಯ ಕೆರೆಯಲ್ಲಿ ಕಪ್ಪೆಗಳಿಗೆ ಪರ್ಮನೆಂಟ್ ಜಾಗ . ನೀರು ಕಡಿಮೆಯಾಗುತ್ತಾ ಬಂದರೂ ಕಪ್ಪೆಗಳು ಕೆರೆಗಳ  ಬದುಗಳಲ್ಲಿ ಕಣ್ಣು ಪಿಲಿ ಪಿಲಿ ಮಾಡುತ್ತಾ ಕುಳಿತ್ತಿರುತ್ತದೆ. ಬಹಳ ಬೇಸರವಾಗುವ ಸಂದರ್ಭ ಎಂದರೆ ಕಪ್ಪೆಯನ್ನು ಕೇರೆ ಹಾವು ಅಥವಾ ಒಳ್ಳೆ ಹಾವು ಹಿಡಿದಾಗ ಅದರ ಚೀರಾಟಕ್ಕೆ ಮನಸು ನಿಜವಾಗಿ ಕರಗುತ್ತದೆ.ನಾನು ತಮ್ಮ ಅಕ್ಕ ಸೇರಿ ಹೆಚ್ಚಾಗಿ ಒಂದು ಉದ್ದನೆಯ ಕೋಲನ್ನು ಕೆರೆಯ ಬದಿಯಲ್ಲಿ ಮುಂಚಿತವಾಗಿ ರಡಿ ಮಾಡಿ ಇಡುತ್ತಿದ್ದೆವು. ಹಾವು ಕಪ್ಪೆಯನ್ನು ಹಿಡಿದಾಗ ಚೀರಾಟ ಕೇಳಿ ಹಾವಿನ ಬಾಯಿಗೆ ಕೋಲು ಹಾಕಿ ಎಷ್ಟೋ ಸಲ ಬಿಡಿಸಿದ್ದು ಉಂಟು. ಕಪ್ಪೆ ಹಾವಿನ ಅಹಾರವೆಂದು ಗೊತ್ತಿದ್ದರೂ  ಕಪ್ಪೆಯನ್ನು ರಕ್ಷಣೆ ಮಾಡುವುದೆ ನಮ್ಮ ಉದ್ದೇಶವಾಗಿತ್ತು ಹೊರತು ಹಾವಿನ ಆಹಾರವನ್ನು ತಪ್ಪಿಸಲಿಕ್ಕೆ ಅಲ್ಲ! 

ಈ ಮಳೆಗಾಲದಲ್ಲಂತೂ ಅನೇಕ ಗಾತ್ರ ಆಕಾರಗಳ ಕಪ್ಪೆಗಳು  ದಾರಿಯಲ್ಲಿ ಕಾಣ ಸಿಗುತ್ತವೆ.  ಎಷ್ಟೋ ಕಪ್ಪೆಗಳು ವಾಹನಗಳಿಗೆ ಸಿಲುಕಿ ಸತ್ತು ಕೊಳೆಯುತ್ತಾ ಕೆಟ್ಟ ವಾಸನೆ ಸೂಸುತ್ತಾ ಬಿದ್ದಿರುತ್ತಿರುವುದು ಈಗ ಮಾಮೂಲಿಯಾಗಿದೆ. ಇನ್ನೊಂದು ಘಟನೆಯನ್ನು ನಾನು ಹೇಳಲೇ ಬೇಕು.ನಮ್ಮ ಕೆರೆಗೆ ಅಪರೂಪಕ್ಕೆ ಕೊಕ್ಕರೆ ಬರುತ್ತಿತ್ತು.ಅದನ್ನು ಹಿಡಿಯಲು ಪಕ್ಕದ ಮನೆಯ ಪರಿಚಯಸ್ಥರೋರ್ವರು ಗಾಳಕ್ಕೆ ಕಪ್ಪೆ ಸಿಕ್ಕಿಸಿ ನೇತಾಡಿಸಿದ್ದರು.ನಾವೆಲ್ಲ ಕಾತುರದಿಂದ ಕೊಕ್ಕರೆ ಬರುವುದಕ್ಕಾಗಿ ಕಾಯುತ್ತಿದ್ದೆವು.ಕೊಕ್ಕರೆಯ ಬದಲು ಕೇರೆ ಹಾವೊಂದು ಬಂದು ನುಂಗಿ ಹುಲ್ಲಿನ ನಡುವೆ ಹೊರಳಾಟ ಮಾಡಿತು.ನಾವೆಲ್ಲ ಅಲ್ಲಿಂದ ಓಡಿಹೋವೆವು ಕೊನೆಗೆ ಗಾಳ ಇಟ್ಟ ಪರಿಚಯಸ್ಥರು ಕೇರೆಯನ್ನು ಹಿಡಿದು ಅದರ ಬಾಯಿಂದ ಗಾಳ ತೆಗೆಯಲು ಸಾಹಸವನ್ನೇ ಮಾಡಿದರು.ಗಮನಿಸ ಬೇಕಾದ ಸಂಗತಿ ಎಂದರೆ ಕಪ್ಪೆಗಳು ಇರುವುದರಿಂದಲೇ ಹಳ್ಳಿಯಲ್ಲಿ ಮಾಡುವ ಕೃಷಿಗೆ ಬಾಧಿಸುವ ಕೆಲವು ಕೀಟಗಳನ್ನು ನಿಯಂತ್ರಿಸುವ ಮಹತ್ವದ ಪಾತ್ರವನ್ನು ಮಾಡುತ್ತದೆ.ಮುಖ್ಯವಾಗಿ ತರಕಾರಿಗಳಿಗೆ ಬಾಧಿಸುವ ಕೆಲವು ಕೀಟಗಳನ್ನು ಕಪ್ಪೆಗಳು ಆಹಾರವಾಗಿ ತಿನ್ನುವುದರಿಂದ ಕೀಟಗಳ ಹತೋಟಿಯಾಗುತ್ತದೆ


ಒಂದು ಮಾಹಿತಿಯ ಪ್ರಕಾರ ಭಾರತದಲ್ಲಿ 340 ಪ್ರಭೇದದ ಕಪ್ಪೆಗಳಿವೆ. ಇವುಗಳಲ್ಲಿ 78 ಪ್ರಭೇದಗಳು ಅಪಾಯದಂಚಿನಲ್ಲಿವೆ. ಇವುಗಳಲ್ಲಿ 17 ಪ್ರಭೇದಗಳಂತೂ ತೀವ್ರ ಸಂಕಷ್ಟದಲ್ಲಿವೆ ಎಂದು ವರದಿ ಬೊಟ್ಟು ಮಾಡಿ ತೋರಿಸಿತ್ತು. ಉಳಿದಂತೆ 32 ಅಳಿವಿನಂಚಿನಲ್ಲಿದ್ದರೆ, 22 ಪ್ರಭೇದಗಳು ಅಳಿವಿನಂಚಿನ ಪ್ರಭೇದಗಳಾಗುವ ಹಾದಿಯಲ್ಲಿವೆ. ಜನರು ಮಾಡುತ್ತಿರುವ ಅವಾಂತರಗಳು ದಿನ ಹೋದಂತೆ ಭೂತಾಪಮಾನ ಹೆಚ್ಚಾಗುತ್ತಿದೆ. ಒಂದು ಕಡೆ ಕಪ್ಪೆಗಳ ಆವಾಸವೇ ಕಾಣೆಯಾಗುತ್ತಿದೆ. ಕಪ್ಪೆಗಳು ಇರುವುದರಿಂದಲೇ ಹಳ್ಳಿಯಲ್ಲಿ ಮಾಡುವ ಕೃಷಿಗೆ ಬಾಧಿಸುವ ಕೆಲವು ಕೀಟಗಳನ್ನು ನಿಯಂತ್ರಿಸುವ ಮಹತ್ವದ ಪಾತ್ರವನ್ನು ಮಾಡುತ್ತದೆ. ತಾಪಮಾನ ಮತ್ತು ನಗರೀಕರಣದ ಪರಿಣಾಮದಿಂದ ಕಪ್ಪೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನದಿಗಳಿಗೆ ಹರಿಯ ಬಿಡುವ ನಗರ ತ್ಯಾಜ್ಯಗಳು ಅಥವಾ ಒಳಚರಂಡಿ ನೀರು ಕಪ್ಪೆಗಳನ್ನು ಕಾಡುತ್ತಿದೆ. ಆದರೆ ಪರಿಸರದ ಸಮತೋಲನದಲ್ಲಿ ಉಭಯವಾಸಿಗಳ ಪಾತ್ರ ಬಹಳ ದೊಡ್ಡದೊಂದು ಎನ್ನುವುದನ್ನು ಮರೆಯುವಂತಿಲ್ಲ.

Wednesday, May 31, 2017

ನಿಜ ಹೇಳಿ ಪಾರ್ಟಿ ಮಾಡಿದ್ದು ನೀವೆನಾ? ಸಾಕ್ಷಿ ಹೇಳುತ್ತಿವೆ ಖಾಲಿ ಬಾಟಲಿಗಳು!

ಕಡಬದಿಂದ :- VK KADABA
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಪು....ಅಂತ ಯೋಗರಾಜ ಭಟ್ಟರ ಹಾಡು ನೀವೆಲ್ಲ ಕೇಳಿದ್ದಿರಿ ಮತ್ತು ಹಾಡಿಗೆ ಕೆಲವರು ಹೆಜ್ಜೆಯೂ ಹಾಕಿದ್ದಿರಿ ಆದ್ರೆ   ಹಾಡಿನ ಕುರಿತಾಗಿ  ನಾನು ಬರೆಯುತ್ತಿಲ್ಲ. ನಾನು ಬರೆಯೊ ಸಂಗತಿಯೇ ಬೇರೆನಿಮಗೆಲ್ಲ ಗೊತ್ತಿರುವ  ಹಾಗೇ ನಮ್ಮ ಸುತ್ತಮುತ್ತ  ಯಾವುದಾದರೂ ಒಂದು ನಮೂನೆಯ ಪಾರ್ಟಿಗಳು ಆಗಾಗ ನಡೆಯುತ್ತ ಇರುತ್ತದೆ .ಹೈ-ಫೈ ಗುಂಡು ಪಾರ್ಟಿ   ಸುದ್ದಿಯಾಗದೆ ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆಮೊನ್ನೆ ವಾಮಂಜೂರು ವ್ಯಾಪ್ತಿಯ ಗುಡ್ಡದಲ್ಲಿ  ಸಂಭ್ರಮಕ್ಕಾಗಿಯೋ  ಅಥವಾ ಬೇರೆ ಕಾರಣಕ್ಕಾಗಿಯೋ  ಒಟ್ಟಿನಲ್ಲಿ ಭರ್ಜರಿ ಪಾರ್ಟಿಯೊಂದು ನಡೆದಿದೆ.  ಅದು ಕಿರಿಕ್ ಪಾರ್ಟಿ  ಅಲ್ಲದಿದ್ದರೂ ಅನುಮತಿ ರಹಿತ ಮದ್ಯದ ಪಾರ್ಟಿ . ಸಾಕ್ಷಿಗಾಗಿ ಉಳಿದಿರುವುದು  ಮರ್ವಯಿ ಗಸಿ ಮತ್ತು ಲೆಕ್ಕಕ್ಕೆ ಸಿಗದ ಖಾಲಿ  ಬೀರು ಬಾಟಲಿಗಳು!
 ಖಾಲಿ ಬೀರು ಬಾಟಲಿಗಳು ಚಿತ್ರ :-ಸಿಂಚನಾ ಶ್ಯಾಂ
 ಗಮನಿಸಿದ ಬೇಕಾದ ವಿಚಾರವೆಂದರೆ  ಮಂಗಳೂರಿನ ಪಡೀಲ್ ಹೋಮ್ ಸ್ಟೇ ದಾಳಿಯ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ವೀಕೆಂಡ್ ಪಾರ್ಟಿಗಳ ಮೇಲೆ ಕಡಿವಾಣ ಹಾಕಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಇಂತಹ ಪಾರ್ಟಿಗಳ ಆಯೋಜನೆಗೆ ನಿರ್ಬಂಧ ಹೇರಿದೆ . ಇಲಾಖೆ ಹೊರಡಿಸಿರುವ ಆದೇಶದಲ್ಲಿ ಪಣಂಬೂರ್ ಬೀಚ್, ಪಿಲಿಕುಳ ನಿಸರ್ಗಧಾಮ ಸೇರಿದಂತೆ ಹೋಮ್ ಸ್ಟೇಗಳಲ್ಲಿ ಪಾರ್ಟಿಗಳನ್ನು ನಡೆಸದಂತೆ ನಿರ್ಬಂಧ ಹೇರಿದೆ. ಜೊತೆಗೆ ಮನೆ ಹೊರತುಪಡಿಸಿ ಬೇರೆಡೆ ಪಾರ್ಟಿ ಮಾಡವುದಾದರೆ ಪೊಲೀಸರಿಂದ ಪೂರ್ವಾನುಮತಿ ಪಡೆಯುವುದು ಈಗ ಕಡ್ಡಾಯ.  ಅಪಾರ್ಟ್ಮೆಂಟ್, ರೆಸಾರ್ಟ್, ಪಬ್ ಹಾಗೂ ರೆಸ್ಟೊರೆಂಟ್ ಅಥವಾ ಹೋಟೆಲ್ ಗಳಲ್ಲಿ ಪಾರ್ಟಿ ಮಾಡಲು ಪೊಲೀಸ್ ಅನುಮತಿ ಅಗತ್ಯವಾಗಿದೆ.  ಪಾರ್ಟಿಯಲ್ಲಿ ಭಾಗವಹಿಸುವ ಒಟ್ಟು ಜನರ ಸಂಖ್ಯೆ, ವಿವರ, ಬಳಸುವ ಧ್ವನಿವರ್ಧಕ ವ್ಯವಸ್ಥೆ ,ಡಿಜೆ ಡ್ಯಾನ್ಸ್ , ಅಲ್ಕೋಹಾಲ್ ನೀಡಲಾಗುತ್ತದೆಯೇ ಮುಂತಾದ ವಿಷಯಗಳನ್ನು ಮೊದಲೇ  ಅರ್ಜಿಯಲ್ಲಿ ತಿಳಿಸಬೇಕಾದುದು ಅಗತ್ಯ.  ಆ ಬಳಿಕ ಅರ್ಜಿಯನ್ನು ಪರೀಶಿಲಿಸಿ ಪುರಸ್ಕರಿಸುವುದು ಅಥವಾ ಅನುಮತಿ ನೀಡದೆ ತಿರಸ್ಕರಿಸುವ ಅಧಿಕಾರ ಪೊಲೀಸರಿಗೆ ಇರುತ್ತದೆ.  ಜೊತೆಗೆ  ಪಾರ್ಟಿ ಮಾಡುವ  ಸ್ಥಳದ  ನೆರೆ ಹೊರೆಯವರಿಂದ  NOC  ಕೂಡಾ ಬೇಕಾಗುತ್ತದೆ.   15 ಕ್ಕಿಂತ ಅಧಿಕ ಮಂದಿ ಒಂದೆಡೆ ಸೇರಿ ಪಾರ್ಟಿ ಮಾಡುವುದಿರಲಿ ಅಥವಾ ಕಡಿಮೆ ಬಜೆಟ್ ನಲ್ಲಿ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡುವುದಿರಲಿ ನಿಯಮ ಮೀರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ .ನಿಜವಾಗಿ ಪಾರ್ಟಿ ಆಯೋಜಿಸುವವರು ಕಾನೂನು ಪಾಲನೆ ಮಾಡುತ್ತಾರೆಯೆ? ಈಗೀಗ  ಅನುಮತಿ ರಹಿತ  ಮದ್ಯ ಪಾರ್ಟಿಗಳಲ್ಲಿ  ಹಲವು ಯುವಕರು ಹಾಗೂ ಯುವತಿಯರು  ಭಾಗವಹಿಸುತ್ತಿರುವುದು ಆತಂಕದ ವಿಷಯ. ಅದರಲ್ಲೂ ಕಾಲೇಜು ಓದುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ ಎನ್ನುವ ಸತ್ಯ ಸಂಗತಿಯನ್ನು ಬಹುತೇಕರು ನಂಬುವುದಿಲ್ಲ. ಸಮಸ್ಯೆಗಳು ಆದಾಗ ಮಾತ್ರ  ಇಲಾಖೆ ಮತ್ತು ಜನರು  ಎಚ್ಚೆತ್ತುಕೊಳ್ಳುತ್ತಾರೆ.
ಯುವ ಸಮುದಾಯಕ್ಕೆ ಪಾರ್ಟಿಗೆ ಹೋಗಬೇಡಿ  ಎಂದು ಉಪದೇಶಿಸಲಾಗದು.ಯಾಕೆಂದರೆ " ದುಡ್ಡು ಕೊರ್ಪಾನ " ಅಥವಾ "ಈ ಪಾರ್ಟಿ ಕೊರ್ಪನಾ" ಎಂದು ಸಾಮೂಹಿಕ ಉತ್ತರ ಸಿಗುತ್ತದೆ. ಕುಡಿಯುವುದರಿಂದ  ಮತ್ತು ಕೆಲವೊಮ್ಮೆ ಮದ್ಯ ಪಾರ್ಟಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಬೇಕಷ್ಟೆ. ಮೊನ್ನೆಯ ಪಾರ್ಟಿಯಲ್ಲಿ ಒಂದು ಮಾಹಿತಿಯ ಪ್ರಕಾರ ಪಾರ್ಟಿಯಲ್ಲಿ ಮೀಸೆ ಚಿಗುರುವ ಯುವಕರ ಸಂಖ್ಯೆ ಯೇ ಹೆಚ್ಚಿತ್ತು .   ಯಾವುದೇ ಪಾರ್ಟಿಗೆ ಹೆತ್ತವರು ಮಕ್ಕಳನ್ನು ರಾತ್ರಿ ಹೊತ್ತು ಕಳುಹಿಸುವುದೇ ಇಲ್ಲ.  ಆಪ್ತ ಸ್ನೇಹಿತನ  ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ಸುಳ್ಳು ನೆಪ ಹೇಳಿದರೆ  ಮಾತ್ರ ಮನೆಯಲ್ಲಿ ಹೊರಗಡೆ ಹೋಗಲು ಗ್ರೀನ್ ಸಿಗ್ನಲ್ ಸಿಗುತ್ತದೆ. ಬಹುತೇಕರು ಮನೆಯಲ್ಲಿ ಸುಳ್ಳು ಹೇಳಿಯೆ  ಪಾರ್ಟಿಗಳಿಗೆ ಹಾಜರಾಗುತ್ತಾರೆ. ಮೋಜು ಮಸ್ತಿ ಮನಸ್ಸಿಗೆ ಖುಷಿ ಕೊಡುತ್ತದೆ ನಿಜ ಆದ್ರೆ ಅದು ಒಂದು ಕವಲು ದಾರಿಗೆ ಪ್ರೇರೇಪಿಸಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು. ಪಾರ್ಟಿಗಳಲ್ಲಿ ಪಾಲ್ಗೊಂಡು ಆಗುವ ಅನಾಹುತಗಳನ್ನು ತಪ್ಪಿಸಬೇಕು .ಈ ಬಗ್ಗೆ ಹೆತ್ತವರೂ ಮಕ್ಕಳ ಬಗ್ಗೆ ಗಮನಹರಿಸಬೇಕು. ಒಮ್ಮೆ  ನಿಜ ಹೇಳಿ ಪಾರ್ಟಿ ಮಾಡಿದ್ದು ನೀವೆನಾ?!

Monday, May 29, 2017

ಕಟ್ಟಿಗೆ ಸೀಳುವವರು ನಿಮ್ಮ ಮನೆಗೆ ಬರುತ್ತರಾ?

ಹಳ್ಳಿ ಬದುಕಿನಲ್ಲಿ  ಜನರ ಬದುಕು ಆಲೋಚನೆ ಕೆಲಸ ಮತ್ತು  ಕಾರ್ಯಕ್ರಮಗಳು... ಹೀಗೆ ಎಲ್ಲವೂ ವಿಬಿನ್ನ . ಅದನ್ನು ಪಟ್ಟಣದ ಬದುಕಿಗೆ ತುಲನೆ ಮಾಡುವುದು ಕಷ್ಟದಾಯಕ ಮತ್ತು ಅಸಮಂಜಸ. ಕೂಡ. ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುವ ಮುಂಚೆ ಒಣ ಕಟ್ಟಿಗೆಯ ದಾಸ್ತಾನು ಮಾಡುವುದು ರೂಢಿ . ತುಳುವರ ಪತ್ತನಾಜೆಯ ಆಸುಪಾಸಿನಲ್ಲಿ ಮಳೆಗಾಲದ ತಯಾರಿಯ ಒಂದು ಭಾಗವಾಗಿ  ಕಟ್ಟಿಗೆ ಸಂಗ್ರಹಿಸುವ ಕೆಲಸವಂತೂ  ಭರ್ಜರಿಯಾಗಿ ನಡೆಯುತ್ತದೆ.  ಕಟ್ಟಿಗೆಯ ತಯಾರಿ ಬಗ್ಗೆ ಮೊದಲು ತಲೆ ಕೆಡಿಸಿಕೊಳ್ಳುವುದು ಹೆಚ್ಚಾಗಿ ಮನೆಯ ಹೆಂಗಸರು. ಅಡುಗೆ ಕೋಣೆಯಲ್ಲಿ ಹೆಚ್ಚು ಹೊತ್ತು ಕೆಲಸದ ನಿರ್ವಹಣೆ ಮಹಿಳೆಯರದ್ದು. ಹಾಗಾಗಿ ಜೋರಾಗಿ ಮಳೆ ಸುರಿಯುವಾಗ ಅಡುಗೆ ತಯಾರಿಯಾಗಬೇಕಾದರೆ ಓಲೆಯಲ್ಲಿ ಬೆಂಕಿ ಹೊತ್ತಿ  ಉರಿಯಬೇಕು.  ಒಂದು ವೇಳೆ ನೀರು ಎಳೆದ ಕಟ್ಟಿಗೆ ಇದ್ದರೆ ಬರೇ ಹೊಗೆ ಮಾತ್ರ ಬರುವುದು .ಊದಿ ಊದಿ ಸುಸ್ತಾಗುವ ಆ ಯಾತನೆ ಮಾತ್ರ  ಪದಗಳಲ್ಲಿಯೂ ಕಟ್ಟಿಕೊಡಲಾಗದು. ಹೆಚ್ಚಾಗಿ ಹತ್ತಿರದ ಕಾಡಿನಿಂದ ಒಣ ಕಟ್ಟಿಗೆಯನ್ನು ಸುತ್ತ ಮುತ್ತಲಿನ ಮಹಿಳೆಯರೆಲ್ಲ ಸೇರಿ ದೂರದಿಂದ ಕಟ್ಟಿಗೆ ಹೊತ್ತುಕೊಂಡು ಬರುತ್ತಾರೆ. 
ಹಳ್ಳಿಗಳಲ್ಲಿ  ಕೆಲವೊಮ್ಮೆ ಮನೆಯ  ಜಾಗದಲ್ಲೇ ಇರುವ ಕಟ್ಟಿಗೆಗೆ ಯೋಗ್ಯವಾದ ಮರಗಳನ್ನು ಕಡಿಯುತ್ತಾರೆ. ಇದರ ಜೊಗೆಗೆ ತೆಂಗಿನ ಮರದ ಕೊತ್ತಲಿಗೆ,ತಿಂಗಿನ ಕಾಯಿ ಸಿಪ್ಪೆ,ಅಡಿಕೆ ಹಾಳೆಯನ್ನೂ ಸಂಗ್ರಹಿಸುತ್ತಾರೆ.  ಈಗೀಗ ಮರ ಕೊಯ್ಯುವ ಹೊಸ ಮೆಶಿನ್ ಗಳು ಬಂದ ಕಾರಣ ಗರಗಸ ಮನೆಯ ಅಟ್ಟದಲ್ಲೋ ಅಥವಾ ಕೊಟ್ಟಿಗೆಯ ಮೂಲೆಯಲ್ಲೋ ಸೇರಿಕೊಂಡದ್ದು ಮಾತ್ರ ಸುಳ್ಳಲ್ಲ.  ಕೆಲವು ಕಡೆಗಳಲ್ಲಿ ಮರದ ಮಿಲ್ಲುಗಳಲ್ಲಿ ತುಂಡರಿಸಿದ ಕಟ್ಟಿಗೆಗಳು ಸಿಗುತ್ತವೆ .ದುಬಾರಿಯಾದರೂ ಅನಿವಾರ್ಯವೆಂಬಂತೆ ತೆಗೆದುಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ಬಹಳ ಮುಖ್ಯವಾದ ವಿಷಯ ಏನಂದ್ರೆ ಕಟ್ಟಿಗೆಯನ್ನು ಭಾಗ ಮಾಡುವವರು ಅಥವಾ ಸೀಳುವವರು ಸಿಗುವುದು ಈಗೀಗ ಬಾರೀ ಅಪರೂಪ.  ಹಳ್ಳಿಗಳಲ್ಲಿ ಈ ಮರದ ದಿಣ್ಣೆಗಳನ್ನು ಸೀಳಲು ಮಾನವ ಸಂಪನ್ಮೂಲವನ್ನೆ ಇಂದಿಗೂ  ಅವಲಂಬಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕಟ್ಟಿಗೆ ಭಾಗ ಮಾಡುವ ಶ್ರಮಗಳು ಅಲ್ಲಲ್ಲಿ ಕಾಣಸಿಗುತ್ತಿದ್ದರು . ಆದರೆ ಬದಲಾದ ಈ ಸಮಯದಲ್ಲಿ ಪಳಗಿದ ಗಟ್ಟಿ ಶರೀರದ ಅನುಭವಿಗಳು ಎಷ್ಟಾದರೂ ಕಡಿಮೆಯೇ. ಕಟ್ಟಿಗೆಯನ್ನು ಬೇಕಾದ ರೀತಿಯಲ್ಲಿ ತುಂಡು ಮಾಡುವ ಕಾಯಕ ಸುಲಭವಲ್ಲ ,ಅದಕ್ಕೆ ಗಟ್ಟಿಮುಟ್ಟಾದ ಶರೀರ ಜೊತೆಗೆ ಸಾಮರ್ಥ್ಯವೂ ಬೇಕು. ಕಟ್ಟಿಗೆಯನ್ನು ಬರೇ  ಕೊಡಲಿಯಿಂದ ಮಾತ್ರ ಭಾಗಮಾಡಲಾಗದು ಇದರ ಜೊತೆಗೆ ಕಬ್ಬಿಣದಿಂದ ತಯಾರಿಸಿದ ಚೆಮ್ಮಟಿಯನ್ನು ಬಳಸುತ್ತಾರೆ . ಬೆರಳೆಣಿಕೆಯ ಮಂದಿ ಈ ವೃತ್ತಿಯನ್ನು ಮಾಡುವ ಕಾರಣಕ್ಕಾಗಿ ಈಗ ಅವರ ಸಂಬಳವೂ ದುಪ್ಪಡ್ಡಾಗಿದೆ . ಮತ್ತು ಬೇಡಿಕೆಯೂ ಹೆಚ್ಚಿದೆ. ಸಾಮಾನ್ಯವಾಗಿ ಈಗ ಕಟ್ಟಿಗೆ ಸೀಳುವ ಅನುಭವಿಗೆ ಈಗ 600 ರೂ ಯಿಂದ 1,000 ಇದೆ  .
ಬೆಳಿಗಗ್ಗಿನ   ಕಾಫಿ ತಿಂಡಿ ,ಮಧ್ಯಾಹ್ನದ  ಊಟ , ಸಾಯಂಕಾಲ ಮತ್ತೆ ಕಾಫಿ ಅಥವಾ ಚಹಾ ಜೊತೆಗೆ ಸಂಬಳ ಇದು ಹಳ್ಳಿಗಳಲ್ಲಿ ಇಂದಿಗೂ ಕಟ್ಟಿಗೆ ಸೀಳುವ ಕಾರ್ಮಿಕನಿಗೆ ನೀಡುವ ಒಂದು ದಿನದ ಪ್ಯಾಕೆಜ್ . ತಂತ್ರಜ್ಞಾನ ಎಷ್ಟೂ ಮುಂದುವರಿದರೂ ಕೂಡ  ಮಾನವ ಶ್ರಮ ಇಂತಹ ಕಷ್ಟಕರ  ಕೆಲಸಗಳಿಗೆ ತೀರ ಅಗತ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.  ನಾನು ಮೊದಲ ವರ್ಷದ ಪದವಿ ತರಗತಿ ಓದುತ್ತಿದ್ದಾಗ ಒಮ್ಮೆ ಕಟ್ಟಿಗೆ ಕಡಿಯಲೆಂದು ಪಕ್ಕದ ಮನೆಯ ಅನುಭವಿ ಕೆಲಸದವರೊಂದಿಗೆ ಹೋಗಿದ್ದೆ . ಆಗ ಕಟ್ಟಿಗೆಗೆ ಕೊಡಲಿಯ ಏಟು ಸರಿಯಾಗಿ ಸಿಗದೆ ಒಮ್ಮೆ ಅತ್ತ ಮತ್ತೊಮ್ಮೆ ಇತ್ತ ಹೋಗುತ್ತಿತ್ತು . ಕೊನೆಗೆ ಮೊದಲು ಕೊಡಲಿ ಹಿಡಿಯುವುದನ್ನು ಆ ಅನುಭವಿ ಹೇಳಿಕೊಟ್ಟರು . ಆಗಲೇ  ಗೊತ್ತಾಗಿದ್ದು ನನಗೆ ಕೊಡಲಿ ಹಿಡಿಯುವುದೂ  ಒಂದು ಕಲೆ ಎಂದು !  ಮರುದಿನ ಮೈ ಕೈ ತುಂಬಾ ನೋವು  ಮಧ್ಯಾಹ್ನ ದ ವರೆಗೂ ಎದ್ದೇಳಲಿಲ್ಲ !  ಈಗಲೂ   ಕಟ್ಟಿಗೆ ತುಂಡು ಮಾಡುವವರು ಸಿಕ್ಕಿದಾಗ ಆ ನೆನಪು ಹಾಗೇ ಒಮ್ಮೆ ಕಣ್ಣ ಮುಂದೆ ಬಂದು ಹೋಗುತ್ತದೆ. ಈಗ ಬಹುತೇಕ ಹಳ್ಳಿ ಮನೆಗಳಲ್ಲಿಯೂ ಗ್ಯಾಸ್ , ಕರೆಂಟ್ ಸ್ಟವ್ ಇನ್ನಿತರ ಆಧುನಿಕ ಸಲಕರಣೆಗಳು ಬಂದಿವೆ.ಬಿಸಿ ನೀರು ಕಾಯಿಸಲು ಈಗ ಬೆಂಕಿಯೇ ಉರಿಸಬೇಕಾಗಿಲ್ಲ.ಗ್ಯಾಸ್ ಗೀಸರ್ ಕೂಡ ಬಳಕೆಯಲ್ಲಿವೆ. ತಂತ್ರಜ್ಞಾನ ಬರುತ್ತಿದ್ದರೂ ಇಂದಿಗೂ ಕಟ್ಟಿಗೆಯಲ್ಲಿಯೇ ಅಡುಗೆ ಮಾಡುವ ಸಂಪ್ರದಾಯ ಮತ್ತು ಪದ್ದತಿ ಇಂದಿಗೂ ಇದೆ.  ಹೊಸ ತಲೆ ಮಾರಿನ ಜನ  ಶ್ರಮ ಪಡುವ ಕೆಲಸಗಳಿಗೆ ಮತ್ತು ಕಟ್ಟಿಗೆ ಹೋರುವುದಕ್ಕೆ ಈಗ  ಹೋಗುವುದಿಲ್ಲ . ಏನಿದ್ದರೂ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾಡಿಸುವ ಗುರಿ. ಮತ್ತು ಆರಾಮವಾಗಿ ಇರಬೇಕೆನ್ನುವ ಇರಾದೆ. ಮಳೆಗಾಲದಲ್ಲಿ ಬಿಸಿ ಬಿಸಿ ಅಡುಗೆಯನ್ನೇ ಬಯಸುವ ಕೆಲವು  ಮನೆ ಸದಸ್ಯರು ಕಟ್ಟಿಗೆ ವಿಷಯದಲ್ಲಿ ಮಾತ್ರ ತಲೆಕೆಡಿಸುಕೊಳ್ಳುವುದಿಲ್ಲ! 
ವಿ.ಕೆ ಕಡಬ

Friday, March 17, 2017

ನಮ್ಮ ಮನೆಯ ಕೆರೆ-ಅಕ್ಷಯ ಪಾತ್ರೆ:- ಆದರೆ ಈಗ ಬತ್ತಲು ಸಿದ್ದವಾಗಿದೆ!

ಮಂಗಳೂರು ಸೇರಿದಂತೆ ತುಳುನಾಡಿನ ಬಹುತೇಕ ಕಡೆಗಳಲ್ಲಿ  ಈಗ  ನೀರು ಪೂರ್ಣ ಪ್ರಮಾಣದಲ್ಲಿ ಇಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆನೀರಿಲ್ಲದೆ ಪರದಾಡುವುದನ್ನುಕಣ್ಣಾರೆ ನೋಡುತ್ತಿದ್ದೇವೆ ಕೂಡ . ನಾನು ನಮ್ಮ ಮನೆಗೆ ಬಳಸುವ ನೀರಿನ ಮೂಲದ ಬಗ್ಗೆ ಹೇಳಬೇಕೆಂದಿರುವೆ. ನಮ್ಮ ಮನೆಯಲ್ಲಿ ಬಾವಿ ಇಲ್ಲ,ಬದಲಾಗಿ ಒಂದು ಸಣ್ಣ ಕೆರೆ ಇದೆ . ನಮ್ಮ ತೋಟದಲ್ಲಿನ ಕೆರೆಗೆ 18 ಮನೆಯವರು ನೀರಿಗೆ ಬರುತ್ತಿದ್ದರು. ಮಂಜಾನೆ 5 ಘಂಟೆಗೆ ಕಿರ್ಕಿರ್ಅಂತ ರಾಟೆಯ ಶಬ್ದ ಕೇಳುತ್ತಿತ್ತು .ಬಟ್ಟೆ ಹೊಗೆಯಲು ,ಯಾವುದೇ ಶುಭ ಸಮಾರಂಭಗಳಿಗೆ ,ದಿನದ ದಿನಚರಿಗೆ ನಮ್ಮ ಮನೆಯ ಕೆರೆಯ ನೀರೆ ಬಳಕೆಯಾಗುತ್ತಿತ್ತು . ಈಗ ಗ್ರಾಮ ಪಂಚಾಯತ್ ನಿಂದ ನೀರಿನ ಸೌಲಭ್ಯ ಬಂದರೂ ಕುಡಿಯುವುದಕ್ಕೆ ನಮ್ಮ ಕೆರೆಯ ನೀರೆ ಬೇಕು .ಎರಡು ವರ್ಷಗಳ  ಹಿಂದೆ ನಮ್ಮ ಕೆರೆಯ ಹತ್ತಿರ ಸಾಯಂಕಾಲದ ಹೊತ್ತಿನಲ್ಲಿ ಜನ ಸಮೂಹ ಇರುತ್ತಿತ್ತು . ನಮ್ಮ ಮನೆಯ ಎದುರು ಭಾಗದಲ್ಲಿ ಕೆರೆ ಇದ್ದ ಕಾರಣ ಎಲ್ಲರೂ ಕರೆದು ಮಾತಾಡುತ್ತಿದ್ದರು.ಕೆಲವೊಮ್ಮೆ ಕಿರಿ ಕಿರಿ ಆದಾಗ ನಾವು ಮನೆಯೊಳಗೆ ಬಾಗಿಲು ಹಾಕಿ ಕೂತದ್ದು ಉಂಟು! . ಪಂಚಾಯತ್ ಕುಡಿಯುವ ನೀರಿನ ಯೋಜನೆ ಬಂದ ಮೇಲೆ ಸರದಿ ಸಾಲಲ್ಲಿ ಬಂದು ನೀರು ಕೊಂಡುಹೋಗುವ ಪ್ರಮೇಯ ಇಲ್ಲ. ಕೆರೆಯನ್ನು ನನ್ನ ತಂದೆ ಪರಿಶ್ರಮದಿಂದ ಮಾಡಿದ್ದಾರೆ( ಈಗ ನಮ್ಮ ಜೊತೆ ಇಲ್ಲ).ಯಾವುದೇ ತಂತ್ರಜ್ಞಾನ ಬಳಸಿಲ್ಲ .ಮೊದಲು ಇಲ್ಲಿ ಸಣ್ಣದಾಗಿ ವರತೆ ಬಂದು ನೀರು ನಿಲ್ಲುತ್ತಿತ್ತು ಬಳಿಕ ಮಾಯವಾಯಿತಂತೆಅದಕ್ಕಾಗಿ ಗುಂಡಿ ಮಾಡಬೇಕಾಯಿತು ಎಂದು ತಂದೆ ಹೇಳಿದ ನೆನಪು.   


ನಮ್ಮ ಮನೆಯಿಂದ ಕುಮಾರಧಾರ ನದಿ 4 ಕಿಲೋ ಮೀಟರ್ ದೂರದಲ್ಲಿದೆ. .ಮಳೆಗಾಳದಲ್ಲಿ ನದಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬಂದಾಗ ಮನೆಯ ಕೆರೆಯ ನೀರಿನ ಬಣ್ಣ ಸ್ವಲ್ಪ ಬದಲಾಗುತ್ತದೆ.ನಮ್ಮ ಮನೆ ಇರುವುದು ಇಳಿಜಾರು ಜಾಗದಲ್ಲಿ, ಸುತ್ತ ಮುತ್ತ  ಸ್ವಲ್ಪ ಅಡಕೆ ತೋಟ,ನೆರೆಮನೆಯವರ ರಬ್ಬರ್ ತೋಟವೂ ಇದೆ.ನಮ್ಮ ದೊಡ್ಡಪ್ಪನ ಮನೆ ಕೂಗಳತೆಯ ದೂರದಲ್ಲಿದೆ . ಅಲ್ಲಿ ಅವರು ಎರಡುಕೆರೆಗಳನ್ನು ನಿರ್ಮಿಸಿದ್ದಾರೆ. ಆದರೆ ಮಳೆಗಾಲ ಹೊರತು ಪಡಿಸಿ ಉಳಿದ ಸಮಯದಲ್ಲಿ ಎರಡು ಕೆರೆಗಳಲ್ಲಿ ನೀರು ಇರುವುದಿಲ್ಲ! ನಮ್ಮ ಕೆರೆಯ ನೂರು ಮೀಟರ್ ದೂರದಲ್ಲಿ ಎರಡು ಸರ್ಕಾರಿ ಕೊಳವೆ ಬಾವಿ ಇದ್ದು ಒಂದರಲ್ಲಿ ಮಾತ್ರ ನೀರು ಲಭ್ಯವಿದೆ.ಯಾವತ್ತು ವರ್ಷಪೂರ್ತಿ ನೀರು ಕೊಡುತ್ತಿದ್ದ ನಮ್ಮ ಕೆರೆ ಬಾರಿ ಮಾತ್ರ ಕೆಸರು ನೀರು ಕೊಡಲು ಸಿದ್ದವಾಗಿದೆ . ನಲ್ವತ್ತು  ವರ್ಷ ಹಳೆಯದಾದ ಕೆರೆಯಲ್ಲಿ ನೀರು ಬತ್ತುತ್ತಿರುವುದು ಇದು ಎರಡನೇ ಸಲ .
2015 ಮೇ ತಿಂಗಳಿನಲ್ಲಿ
 

ಬಾರಿ ಒಂದೇ ಕೆರೆಯಲ್ಲಿ ಎರಡು ಪಂಪ್ ಸೆಟ್ ಜೋಡಿಸಲಾಗಿದೆ . ಕೆರೆಯಿಂದ ಯಾರೆಲ್ಲ ನೀರು ತೆಗೆದುಕೊಂಡು ಹೋಗುತ್ತಾರೊ ಅವರೆಲ್ಲರೂ ಬಾರದಿದ್ದರೂ ಕೆಲವರು ಕೈ ಜೋಡಿಸಿ ಹೂಳೆತ್ತುವ ಮಾಡುತ್ತೆವೆ ಕಳೆದ ಬಾರಿ ಕೆಸರಿನಡಿಯಲ್ಲಿ ಐದು ಕೊಡಪಾನ ಬೇರೆ ಸಿಕ್ಕಿದೆ!! ವರ್ಷ ಯಾವುದೇ ಕೆಸರು ತೆಗೆಯುವ ಕಾರ್ಯಕ್ಕೆ ಮುಂದಾಗಲಿಲ್ಲ . ವರ್ಷದಿಂದ ಕೆರೆಯ ಸುತ್ತಮುತ್ತ ಇಂಗು ಗುಂಡಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ . ಊರಿಗೆಲ್ಲ ಪಂಚಾಯತ್ ಒದಗಿಸಿದ ನೀರು ಬಂದರೂ ನಾವು ನಳ್ಳಿ ಹಾಕಿಸಿಕೊಂಡಿಲ್ಲ . ಆದರೆ ಮನೆಯ ಕೆರೆ ವರ್ಷಪೂರ್ತಿ ನೀರು ಕೊಡುವ ಅಕ್ಷಯ ಪಾತ್ರೆ ಯಾಗಿದೆ