Friday, February 24, 2017

ಮುದ್ದಿನ ಸ್ಟೇಟಸ್ಸೆ...ನಿನೇಕೆ ಮರೆಯಾದೆ...?!

ತಮ್ಮ ದಿನಚರಿಯನ್ನು ಕ್ರಮಬದ್ದವಾಗಿ ಡೈರಿಯಲ್ಲಿ ಬರೆದಿಡುವ ಒಂದು ಕಾಲವಿತ್ತು  .ಕಾಲ ಕಾಲಕ್ಕೆ ಅದನ್ನು  ನೋಡಿ ಮೆಲುಕು ಹಾಕುವುದು. ತನ್ನ ಮನಸಿನ ಭಾವ ಮತ್ತು ನಡೆದ ಸತ್ಯ ಸಂಗತಿಗಳು ಅಕ್ಷರ ರೂಪದಲ್ಲಿ ದಾಖಲು ಮಾಡುವುದು ದಿನದ ಕೆಲಸವೂ ಆಗಿತ್ತು. ಅದೆಲ್ಲವನ್ನು ಸದ್ದಿಲ್ಲದೆ ನುಂಗಿ ಹಾಕಿದ್ದು  ಸಾಮಾಜಿಕ ಜಾಲತಾಣಗಳು.( ಕೆಲವರು ಈಗಲೂ ಬರೆಯುತ್ತಿರಬಹುದು) ಇದರಲ್ಲಿ ಮುಖ್ಯವಾಗಿ ವಾಟ್ಸಪ್ ವಿಶೇಷ ಪಾತ್ರವನ್ನು ವಹಿಸಿದೆ .ಬೆಳಿಗೆದ್ದು ಯಾರ ಮುಖವ ನಾನು ನೋಡಲಿ ಎಂದು ಹಾಡುವ ಜಾಯಮಾನದ ಮನಸುಗಳು! ಬೆಳಿಗ್ಗೆ ಎದ್ದೇಳುವ ಚಿತ್ರ, ಹಲ್ಲು ಉಜ್ಜುವ ಚಿತ್ರ, ಕಾಫಿ ಕುಡಿಯುವ ಚಿತ್ರ, ದಾರಿಯಲ್ಲಿ ನಡೆದು ಕೊಂಡು ಹೋಗುವ ಚಿತ್ರ, ದಾರಿ ಮಧ್ಯೆ ಹೊಸಬರು ಸಿಕ್ಕಾಗ ಇನ್ನೊಂದು ಚಿತ್ರ, ಕಾಲೇಜು ಅಥವಾ ಆಫಿಸಿನಲ್ಲಿ ಒಂದು ಚಿತ್ರ.... ಹೀಗೆ ಪಟ್ಟಿ ದೊಡ್ಡದು. ಒಟ್ಟಿನಲ್ಲಿ ತಾಂತ್ರಿಕವಾಗಿ   ದಿನದ ದಿನಚರಿ ದಾಖಲಾಗುತ್ತಾ ಇರುತ್ತದೆ.  ಇದು ಬರೇ ಡಿ.ಪಿ ಎಂದುಕೊಳ್ಳುವ ವಿಷಯಕ್ಕೆ ಆಯ್ತು. ಇನ್ನೂ ಸ್ಟೇಟಸ್ ಬಗ್ಗೆ ಬರೆಯಲೇ ಬೇಕು .ಸಂತೋಷ ದಿಂದ ಇದ್ದರೆ, ದುಖದಿಂದ ಇದ್ದಾಗ ಪ್ರೀತಿಯಲ್ಲಿ ಬಿದ್ದಾಗ, ಮುನಿಸುಕೊಂಡೆರೆ ಹೀಗೆ ಹಲವು ಆಯಾಮಗಳಲ್ಲಿ ಸಿಂಬಲ್ ಮತ್ತು ಕೆಲವೇ ವಾಕ್ಯಗಳಲ್ಲಿ ತಮ್ಮ ಸಂಪರ್ಕದಲ್ಲಿ ಇರುವವರಿಗೆ ಬರಹಗಳು ಕಾಣುತ್ತದೆ.
ಹಳೆಯ ವಾಟ್ಸಪ್ ಸ್ಟೇಟಸ್
ಸಾಕಷ್ಟು ಸ್ಟೇಟಗಳು ಒಬ್ಬರೊನೊಬ್ಬರು ಮೀರಿಸುವಂತೆ ಇರುತ್ತವೆ. ಕೆಲವರು ಕವನದ ಸಾಲುಗಳನ್ನು ಹಾಕಿರುತ್ತಾರೆ .ಕೆಲವರು ಪ್ರೇಮ ಅಮಲಿನಲ್ಲಿ ಬರೆದ ವಾಕ್ಯಗಳು ಅಥವಾ ಸ್ಟೇಟಸ್ ನೋಡಿಯೇ  ಪ್ರೀತಿಯು ಉಕ್ಕಿ ಬರುವಂತೆ ಬರೆಯುವವರೂ ಇದ್ದಾರೆ. !! ಕೆಲವು ಸಲ ಮತ್ತೊಬ್ಬರ ಸ್ಟೇಟಸ್ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತವೆ.ಈಗ ಸಾಕಷ್ಟು ಸಂಖ್ಯೆಯಲ್ಲಿ ಗುಂಪುಗಳು ಹುಟ್ಟಿಕೊಂಡ ಕಾರಣದಿಂದ ಹೊಸಬರು ಪರಿಚಯವಾಗುತ್ತಾರೆ. ಕೆಲವರು ಸ್ನೇಹಿತರಾಗುತ್ತಾರೆ. ಇನ್ನೂ ಕೆಲವರು ಪ್ರೇಮಿಗಳಾಗುತ್ತಾರೆ! ಕೆಲವೊಮ್ಮೆ ಹುಡುಗ  ಹುಡುಗಿಗೆ ಸ್ಟೇಟಸ್ ಚೇಂಜ್ ಮಾಡು ಡಿ.ಪಿ ಬದಲಾಯಿಸು ಎಂದು ಹೇಳಿದ ಎಷ್ಟೋ ಉದಾಹರಣೆ ಗಳಿವೆ. ಪ್ರೀತಿ, ಪ್ರೇಮದ ವಿಧಾನಗಳು ಬದಲಾಗಿವೆ. ಪ್ರೀತಿಯನ್ನು ಹೇಳಿಕೊಳ್ಳುವುದರಲ್ಲೂ ಸ್ವಲ್ಪ ಭೀನ್ನವಾಗಿದೆ. ಪ್ರೀತಿ ಮಾಡಿಕೊಳ್ಳುವುದಕ್ಕೆ  ಈಗ ಪಾರ್ಕ್, ದೇವಸ್ಥಾನ,ಬೀಚು ಸಿನೆಮಾ ಥೀಯೆಟರ್ ಸೇರಿಂದಂತೆ ಯಾವುದೇ ಲವರ್ಸ್ ಸ್ಪಾಟ್ ಗಳ ಅಗತ್ಯವಿಲ್ಲ, ಅಂಗೈಯಲ್ಲೊಂದು ಫೋನ್ ಇದ್ದರೆ ಸಾಕು ಎಲ್ಲವೂ ಸ್ಟೇಟಸ್ ನಲ್ಲಿ ಮತ್ತು ಡಿ.ಪಿ ಯಲ್ಲಿ ಸುಧಾರಿಸುವ ಕಾಲ!! ಎಷ್ಟೋ ಸಲ ಡಿ.ಪಿ  ಮತ್ತು ಸ್ಟೇಟಸ್ ಗೆ ಸಂಬಂಧ ವೇ ಇರುವುದಿಲ್ಲ.  ಸ್ವಲ್ಪ ಜನ ವಾರಕೊಮ್ಮೆ, ತಿಂಗಳಿಗೊಮ್ಮೆ  ಸ್ಟೇಟಸ್ ಬರೆದರೆ, ಯುವ ಮನಸುಗಳು ನಿಮಿಷಕೊಮ್ಮೆ ಏನಾದರೂ ಬರೆಯುತ್ತಿರುತ್ತಾರೆ.  ಇದಕ್ಕೆ ನಾನು ಹೊರತಲ್ಲ! ಆದರೆ ಕೆಲವರಿಗೆ ಕುತೂಹಲ  ಇನ್ನೂ ಹಲವರಿಗೆ ಅನುಮಾನ ಅನೇಕರಿಗೆ ಈ ಸ್ಟೇಟಸ್ ಗಳು ತಮಾಷೆ ಸುದ್ದಿಯೂ ಆಗಿರುತ್ತದೆ.  ಬದಲಾವಣೆ ಜಗದ ನಿಯಮ  ಎನ್ನುವ ಮಾತು ನಾವು ಆಗಾಗ ಕೇಳುವ ಮಾತು.ಇದು ಬೇರೆ ಬೇರೆ ಕ್ಷೇತ್ರ ಕ್ಕೆ ಅನ್ವಯಿಸುತ್ತದೆ. ಮಾತನ್ನು ಈಗ ವಾಟ್ಸಪ್  ಸ್ಟೇಟಸ್ ನ ವಿಚಾರಕ್ಕೂ ಸಮೀಕರಿಸಿ ನೋಡಬೇಕೇಕಿದೆ. ಈಗ ಸಿಂಗಲ್ ಲೈನ್ ನಲ್ಲಿ ಸ್ಟೇಟಸ್ ಬರೆಯುವ ಕಾಲ ಹೋಯ್ತು .ವಾಟ್ಸ್ಆಪ್ ಬಳಕೆದಾರರು ತಮ್ಮ ಪರಿಚಯ ಇರುವ ಸ್ನೇಹಿತ ವರ್ಗಕ್ಕೆ  ಕಾಣುವಂತೆ ಫೋಟೋಗಳು ಹಾಗೂ ವೀಡಿಯೋಗಳನ್ನು ತಮ್ಮ ಸ್ಟೇಟಸ್ನಲ್ಲೇ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಹೊಸ ವಾಟ್ಸ್ಆಪ್ ಫೀಚರ್ ಬಂದಿದೆ .ಇದರಿಂದ ಕೆಲವರಿಗೆ ಬೇಸರ ಹಲವರಿಗೆ ಸಂತೋಷ.
ಹೊಸ ವಾಟ್ಸ್ ಪ್ ಸ್ಟೇಟಸ್
  ಬದಲಾವಣೆಗಳು  ಆಂಡ್ರಾಯ್ಡ್, ಐಒಎಸ್ ಹಾಗೂ ವಿಂಡೋಸ್ ಸ್ಮಾರ್ಟ್ ಫೋನುಗಳಲ್ಲಿ ಲಭ್ಯವಿದೆ. ಹೊಸದಾಗಿ ಯಾರು ಕೂಡ ಫೀಚರನ್ನು  ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಪ್ ಡೇಟ್ ಮಾಡಬೇಕಿಲ್ಲ, ಅದು ಆಪ್ ನಲ್ಲೆ  ಲಭ್ಯವಿದೆ. ಐಒಎಸ್ ಗಳಲ್ಲಿ ಸ್ಟೇಟಸ್ ಸ್ಕ್ರೀನಿನ ಎಡ ತುದಿಯಲ್ಲಿ ತನ್ನದೇ ಆದ ಟ್ಯಾಬ್ ಇದೆ. ಅದರ ನಂತರ ಕಾಲ್ಸ್, ನಂತರ ನಡುವೆ ಕ್ಯಾಮರಾ, ನಂತರ ಚ್ಯಾಟ್ ಹಾಗೂ ಸೆಟ್ಟಿಂಗ್ ಗಳಿವೆ.  ಆಂಡ್ರಾಯ್ಡ್ ಫೋನುಗಳಲ್ಲಿ ಕ್ಯಾಮೆರಾ, ಚ್ಯಾಟ್ಸ್ ಸ್ಟೇಟಸ್ ನಂತರ ಕಾಲ್- ಕ್ರಮಾಂಕದಲ್ಲಿ ಟ್ಯಾಬ್ ಗಳಿರುತ್ತವೆ. ಕೇವಲ ವಾಕ್ಯಗಳನ್ನು ತಮ್ಮ ಸ್ಟೇಟಸ್ ನಲ್ಲಿ ಹಾಕುವುದಕ್ಕಿಂತ ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಗಳಿಗೆ ತಮಗಿಷ್ಟವಾದ ಫೋಟೋ ಅಥವಾ ವೀಡಿಯೊ ತೋರಿಸಬಹುದು. ಆದರೆ ಇವುಗಳು ಕೇವಲ 24 ಗಂಟೆಗಳ ತನಕ ಮಾತ್ರ ಲಭ್ಯವಿದ್ದು ನಂತರ ಕಾಣಿಸುವುದಿಲ್ಲ.ಹಿಂದೆ ಇದ್ದ ಸಿಂಗಲ್ ಲೈನ್ ವಾಕ್ಯ ರೂಪದ ಸ್ಟೇಟಸ್ ಗೆ ಮರು ಉತ್ತರಿಸುವ ಆಯ್ಕೆ ಇರಲಿಲ್ಲ ಆದರೆ  ಈಗ ಒಬ್ಬರ ಸ್ಟೇಟಸ್ ಅಪ್ ಡೇಟ್ ಗೆ ರಿಪ್ಲೈ ಮಾಡುವ ಆಪ್ಶನ್ ಕೂಡ ಇದೆ. ನಿಮ್ಮ ಕಾಂಟ್ಯಾಕ್ಟ್ ಗಳು ಕಾಣಿಸುವಲ್ಲಿ ನೀಲಿ ವೃತ್ತಗಳಿದ್ದರೆ ಅವರ ಸ್ಟೇಟಸ್ ಅಪ್ ಡೇಟ್ ಇದೆಯೆಂದು ಅರ್ಥ.  ಸ್ಟೇಟಸನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಲು ಸಾಧ್ಯವಿದೆ .ಸಾಮಾಜಿಕ ಜಾಲತಾಣದಲ್ಲಿ  ಸ್ಟೇಟಸ್ ಬದಲಾದರೂ ನಿತ್ಯ ಜೀವನದಲ್ಲಿ ನಮ್ಮ ಸ್ಟೇಟಸ್ ಗೆ ಧಕ್ಕೆ ಬಾರದಿರಲಿ


Friday, February 17, 2017

ಹೆತ್ತವರು ಆಸ್ಪತೆಗೆ…ಮಕ್ಕಳು ವಿದೇಶಕ್ಕೆ

ಬೇಡುವೆನು ವರವನ್ನು ಕೊಡು ತಾಯೇ ಜನ್ಮವನು ಕಡೆ ತನಕ ಮರೆಯಲ್ಲ ಜೋಗಿ... ಅರ್ಥಪೂರ್ಣವಾದ ಹಾಡನ್ನು ನೀವು ಎಲ್ಲಾದರೂ ಕೇಳಿರುತ್ತಿರಿ.ಅಥವಾ ಇಂತಹ ತಾಯಿ ಕುರಿತ ಹಾಡುಗಳನ್ನು ಮನಸಲ್ಲಿ  ಒಮ್ಮೆಯಾದರೂ ಗುನುಗಿರಬಹುದು. ಯಾಕೆ ಮುನ್ನುಡಿ ಅಂತ ಯೋಚನೆ ಮಾಡುತ್ತಿರಬಹುದು. ಮನೆಯಲ್ಲಿ ಹೆತ್ತ ತಾಯಿ, ತಂದೆಗೆ ಪ್ರಾಯ ಆದಾಗ ಮನೆಯಲ್ಲಿಯೇ ಅವರ ಸೇವೆ ಮಾಡುವುದು ಹಿಂದಿನಿಂದ ಬಂದಿರುವ ಪದ್ದತಿ. ಇದು ಕೂಡು ಕುಟುಂಬದ ಕೊಡುಗೆಯೂ ಹೌದು. ಎಲ್ಲಾದರೂ ಆರೋಗ್ಯದಲ್ಲಿ ಏರುಪೇರು ಆದಾಗ ಮಾತ್ರ ಆಸ್ಪತ್ರೆಯತ್ತ  ಮುಖಮಾಡುತ್ತಾರೆ ಅಷ್ಟೆ. ತಂತ್ರಜ್ಞಾನದ ಜೊತೆಗಿನ ಆಧುನಿಕ ಈ ಕಾಲದ ಬದುಕು ಬದಲಾದಂತೆ ಹಿರಿಯರನ್ನು ನೋಡಿಕೊಳ್ಳುವ, ಆರೈಕೆ ಮಾಡುವ ರೀತಿಯೂ ಬದಲಾಗಿದೆ. ಎಷ್ಟೋ ಜನರು ತಮ್ಮ ಹೆತ್ತವರನ್ನು ವೃದ್ದಾಶ್ರಮಗಳಿಗೆ ಸೇರಿಸಿರುವ ಸಂಗತಿಗಳನ್ನು ಓದಿದ್ದರಿ ಮತ್ತು ಕಣ್ಣರೇ ಕಂಡಿದ್ದರಿ. ಆದರೆ ಆಸ್ಪತ್ರೆಯಲ್ಲಿ ಸೇರಿಸಿ ಅಲ್ಲೇ ಆರೈಕೆ ಮಾಡುತ್ತಾ ಅಪರೂಕ್ಕೆ ನೋಡುವ ವಿಚಾರ ನಿಮಗೆ ತಿಳಿದಿದೆಯಾ? ಸುದ್ದಿ ಹೇಳ್ತಾ ಇರೋದು ಪಕ್ಕದ ರಾಷ್ಟ್ರ ಅಥವಾ ರಾಜ್ಯದಲ್ಲ ,ನಮ್ಮ ಮಂಗಳೂರಿನದ್ದು  ಎನ್ನುವುದು ಮಾತ್ರ ಸತ್ಯ ವಿಚಾರ.
  ಈ ವಯೋವೃದ್ದೆಗೆ ಸರಿ ಸುಮಾರು 80 ರ ಹರೆಯ.ನಡೆಯಲು ಮಾತ್ರ ಅಸಾಧ್ಯ. ಗಂಡನನ್ನು ಕಳೆದುಕೊಂಡಿರುವ ಈಕೆಯದು ಶ್ರೀಮಂತ ಕುಟುಂಬ .ಇಬ್ಬರು ಮಕ್ಕಳು ಇಬ್ಬರೂ ಕೆಲಸದಲ್ಲಿರುವವರು. ದೊಡ್ಡ ಮಗ ಡಾಕ್ಟರ್ ಇರೋದು ಮಾತ್ರ ಅಮೇರಿಕಾದಲ್ಲಿ .ಕಿರಿಯ ಮಗ ಮಂಗಳೂರಿನಲ್ಲಿ ವಾಸ .ಯವ್ವನದ ದಿನಗಳನ್ನು ಆರಾಮದಾಯಕವಾಗಿ ಕಳೆದ ಈ ಹಿರಿಯ ಜೇವಕ್ಕೆ ವೃದ್ಯಾಪ್ಯ ಸಮಯವನ್ನು ತನ್ನ ಮಗ ಸೊಸೆ ಮೊಮ್ಮಕ್ಕಳನ್ನು ನೋಡುತ್ತಾ ಮನೆಯಲ್ಲಿ ಇರಬೇಕೆಂಬ ಆಸೆ. ಆದ್ರೆ ಅದೆಲ್ಲವೂ ಈಕೆಗೆ ಬರೀ ಕನಸಾಯಿತು. ಮನೆಯಲ್ಲಿ ಈ ವಯೋವೃದ್ದೆಯ ನಿತ್ಯ ಕೆಲಸವನ್ನು ಮಾಡಲು ಜನವಿಲ್ಲ ಮತ್ತು ಸಮಯವಿಲ್ಲ ಎಂಬ ಕಾರಣದಿಂದ ಕೆಲಸಕ್ಕೆ ಜನ ಮಾಡಿ ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದಾರೆ .
ಅಂದಹಾಗೆ ನಮ್ಮ ದ.ಕ ಜಿಲ್ಲೆಯ ಜನರು ಮನೆ ಕೆಲಸ ಮತ್ತು ಆಸ್ಪತ್ರೆಯಲ್ಲಿ ನಿಲ್ಲಲು ನಗರಕ್ಕೆ ಬರುವುದು ಕಡಿಮೆ.(ಅಪವಾದ ಇರಬಹುದು).ಅದಕ್ಕಾಗಿಯೇ ಈ ಕುಟುಂಬ ಹಾಸನ ಮೂಲದ ಹುಡುಗಿಯೊಬ್ಬಳನ್ನು ಈ ವಯೋವೃದ್ದೆಯನ್ನು ನೋಡಿ ಕೊಳ್ಳಲು ನೇಮಿಸಿಕೊಂಡಿದ್ದಾರೆ. ಸಮಯದ ಕೊರತೆ ಇರುವ ಮತ್ತು ಹಣದ ಕೊರತೆ ಇಲ್ಲದವರ ಬದುಕೇ ಹೀಗೆ ಅನ್ನಬೇಕೆ? ತನ್ನ ಓರ್ವ ಮಗ ಅಪರೂಪಕ್ಕೆ ಬಂದರೆ, ಇಲ್ಲೇ ಇರುವ ಮಗ ಮತ್ತು ಸೊಸೆ ದಿನದಲ್ಲಿ ಒಮ್ಮೆ ಅಥವಾ ಮೂರು ದಿನಗಳಿಗೊಮ್ಮೆ ಬಂದು ಭೇಟಿ ನೀಡಿ ಹೋಗುತ್ತಾರೆ. ಇದೊಂದು ಕರಾವಳಿಯ ಹೆಸರಾಂತ ಆಸ್ಪತ್ರೆ ಯಲ್ಲಿ ನಾನು ಕಂಡ ಸತ್ಯ ಸಂಗತಿ. ಈ ಆಸ್ಪತ್ರೆಗೆ ಪ್ರತಿ ತಿಂಗಳು ಬಿಲ್ ಪಾವತಿ ಮಾಡಿದರೆ ಆಯಿತು ಅಷ್ಟೇ. ಸಾಯುವ ವರೆಗೆ  ನೋಡಿಕೊಳ್ಳುತ್ತಾರೆ ಒಂದು ವೇಳೆ ಅವರ ನಿಗಧಿತ ದಿನಕ್ಕಿಂತ ಮುಂಚೆ ಸತ್ತರೆ ಐ. ಸಿ. ಯು ನಲ್ಲಿ ಇಟ್ಟು ಇನ್ನೂ ಒಂದು ತಿಂಗಳು ಹೆಚ್ಚು ಬದುಕಿಸುತ್ತಾರೆ! .ಇದು ಒಂದು ಕುಟುಂಬದ ಮತ್ತು ಒಂದು ಆಸ್ಪತ್ರೆಯ ಕಥೆಯನ್ನು ನಿಮಗೆ ಹೇಳಿದೆ. ಆದರೆ ನಮ್ಮ ಮಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ  ಕಾರ್ಯಚರಿಸುವ ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳು, ಆಯೆರ್ವೇದಿಕ್ ಕ್ಲೀನಿಕ್ ಗಳು ಬೇಕಾದಷ್ಟು ಇವೆ. ಎಲ್ಲೋ ಒಂದು ಕಡೆಯಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಆಸ್ಪತ್ರೆಗಳು ವೃದ್ದಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿವೆಯೇ ಅನ್ನುವ  ಅನುಮಾನ ಬರುತ್ತಿದೆ . ಆಸ್ಪತ್ರೆಗಳಲ್ಲಿ ಈಗ ಅದಕ್ಕಾಗಿಯೇ ವಿಶೇಷ ಕೊಠಡಿಗಳು ಲಭ್ಯ ಇವೆ.
ವಿದ್ಯಾವಂತ ಸಮಾಜದಲ್ಲಿ ಅನುಕರಣೀಯ  ಜೀವನ ಮೌಲ್ಯಗಳು ಕಾಲ ಕಳೆದಂತೆ ನಶಿಸಿ ಹೋಗುತ್ತಿರುವುದು ದುರಂತ. ಹಳ್ಳಿ ಮತ್ತು ಪಟ್ಟಣವನ್ನು ಎಲ್ಲಾ ವಿಚಾರಕ್ಕೂ ಹೋಲಿಕೆ ಮಾಡುವಾಗ ಈ ವಿಚಾರದಲ್ಲೂ ತುಲನೆ ಮಾಡಿದರೆ ತಪ್ಪಾಗಲಾರದು.ವಿದ್ಯಾಭ್ಯಾಸದ ದಾರಿ ಹಿಡಿಯದ ಹಳ್ಳಿಗರು ತನ್ನ ಮಗ, ಮಗಳು, ಮನೆಯ ಸದಸ್ಯರು ಅಥವಾ ನೆಂಟರು ಹಿರಿಯರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಅನೇಕ ಸಂಗತಿಗಳನ್ನು ಗಮನಿಸಬಹುದು.ಈಗ ಬರೇ ಸರಳ ಜೀವನ,ಸಿದ್ದಾಂತಗಳು,ಭಾವನೆಗಳ ಜೊತೆ ಬದುಕುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದುದನ್ನು ಬದಲಾದ ಸಮಾಜ ಎನ್ನಬೇಕೆ?ಆಧುನಿಕ ಬದುಕು ಎನ್ನಬೇಕೆ?ಸ್ಥಿತಿವಂತರ ಹೊಸ ಪರಿಕಲ್ಪನೆ ಎಂದುಕೊಳ್ಳಬೇಕೆ? ಲೆಕ್ಕವಿಲ್ಲದ ಪ್ರಶ್ನೆಗಳು ಹುಟ್ಟುತ್ತಿವೆ.