Friday, February 17, 2017

ಹೆತ್ತವರು ಆಸ್ಪತೆಗೆ…ಮಕ್ಕಳು ವಿದೇಶಕ್ಕೆ

ಬೇಡುವೆನು ವರವನ್ನು ಕೊಡು ತಾಯೇ ಜನ್ಮವನು ಕಡೆ ತನಕ ಮರೆಯಲ್ಲ ಜೋಗಿ... ಅರ್ಥಪೂರ್ಣವಾದ ಹಾಡನ್ನು ನೀವು ಎಲ್ಲಾದರೂ ಕೇಳಿರುತ್ತಿರಿ.ಅಥವಾ ಇಂತಹ ತಾಯಿ ಕುರಿತ ಹಾಡುಗಳನ್ನು ಮನಸಲ್ಲಿ  ಒಮ್ಮೆಯಾದರೂ ಗುನುಗಿರಬಹುದು. ಯಾಕೆ ಮುನ್ನುಡಿ ಅಂತ ಯೋಚನೆ ಮಾಡುತ್ತಿರಬಹುದು. ಮನೆಯಲ್ಲಿ ಹೆತ್ತ ತಾಯಿ, ತಂದೆಗೆ ಪ್ರಾಯ ಆದಾಗ ಮನೆಯಲ್ಲಿಯೇ ಅವರ ಸೇವೆ ಮಾಡುವುದು ಹಿಂದಿನಿಂದ ಬಂದಿರುವ ಪದ್ದತಿ. ಇದು ಕೂಡು ಕುಟುಂಬದ ಕೊಡುಗೆಯೂ ಹೌದು. ಎಲ್ಲಾದರೂ ಆರೋಗ್ಯದಲ್ಲಿ ಏರುಪೇರು ಆದಾಗ ಮಾತ್ರ ಆಸ್ಪತ್ರೆಯತ್ತ  ಮುಖಮಾಡುತ್ತಾರೆ ಅಷ್ಟೆ. ತಂತ್ರಜ್ಞಾನದ ಜೊತೆಗಿನ ಆಧುನಿಕ ಈ ಕಾಲದ ಬದುಕು ಬದಲಾದಂತೆ ಹಿರಿಯರನ್ನು ನೋಡಿಕೊಳ್ಳುವ, ಆರೈಕೆ ಮಾಡುವ ರೀತಿಯೂ ಬದಲಾಗಿದೆ. ಎಷ್ಟೋ ಜನರು ತಮ್ಮ ಹೆತ್ತವರನ್ನು ವೃದ್ದಾಶ್ರಮಗಳಿಗೆ ಸೇರಿಸಿರುವ ಸಂಗತಿಗಳನ್ನು ಓದಿದ್ದರಿ ಮತ್ತು ಕಣ್ಣರೇ ಕಂಡಿದ್ದರಿ. ಆದರೆ ಆಸ್ಪತ್ರೆಯಲ್ಲಿ ಸೇರಿಸಿ ಅಲ್ಲೇ ಆರೈಕೆ ಮಾಡುತ್ತಾ ಅಪರೂಕ್ಕೆ ನೋಡುವ ವಿಚಾರ ನಿಮಗೆ ತಿಳಿದಿದೆಯಾ? ಸುದ್ದಿ ಹೇಳ್ತಾ ಇರೋದು ಪಕ್ಕದ ರಾಷ್ಟ್ರ ಅಥವಾ ರಾಜ್ಯದಲ್ಲ ,ನಮ್ಮ ಮಂಗಳೂರಿನದ್ದು  ಎನ್ನುವುದು ಮಾತ್ರ ಸತ್ಯ ವಿಚಾರ.
  ಈ ವಯೋವೃದ್ದೆಗೆ ಸರಿ ಸುಮಾರು 80 ರ ಹರೆಯ.ನಡೆಯಲು ಮಾತ್ರ ಅಸಾಧ್ಯ. ಗಂಡನನ್ನು ಕಳೆದುಕೊಂಡಿರುವ ಈಕೆಯದು ಶ್ರೀಮಂತ ಕುಟುಂಬ .ಇಬ್ಬರು ಮಕ್ಕಳು ಇಬ್ಬರೂ ಕೆಲಸದಲ್ಲಿರುವವರು. ದೊಡ್ಡ ಮಗ ಡಾಕ್ಟರ್ ಇರೋದು ಮಾತ್ರ ಅಮೇರಿಕಾದಲ್ಲಿ .ಕಿರಿಯ ಮಗ ಮಂಗಳೂರಿನಲ್ಲಿ ವಾಸ .ಯವ್ವನದ ದಿನಗಳನ್ನು ಆರಾಮದಾಯಕವಾಗಿ ಕಳೆದ ಈ ಹಿರಿಯ ಜೇವಕ್ಕೆ ವೃದ್ಯಾಪ್ಯ ಸಮಯವನ್ನು ತನ್ನ ಮಗ ಸೊಸೆ ಮೊಮ್ಮಕ್ಕಳನ್ನು ನೋಡುತ್ತಾ ಮನೆಯಲ್ಲಿ ಇರಬೇಕೆಂಬ ಆಸೆ. ಆದ್ರೆ ಅದೆಲ್ಲವೂ ಈಕೆಗೆ ಬರೀ ಕನಸಾಯಿತು. ಮನೆಯಲ್ಲಿ ಈ ವಯೋವೃದ್ದೆಯ ನಿತ್ಯ ಕೆಲಸವನ್ನು ಮಾಡಲು ಜನವಿಲ್ಲ ಮತ್ತು ಸಮಯವಿಲ್ಲ ಎಂಬ ಕಾರಣದಿಂದ ಕೆಲಸಕ್ಕೆ ಜನ ಮಾಡಿ ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದಾರೆ .
ಅಂದಹಾಗೆ ನಮ್ಮ ದ.ಕ ಜಿಲ್ಲೆಯ ಜನರು ಮನೆ ಕೆಲಸ ಮತ್ತು ಆಸ್ಪತ್ರೆಯಲ್ಲಿ ನಿಲ್ಲಲು ನಗರಕ್ಕೆ ಬರುವುದು ಕಡಿಮೆ.(ಅಪವಾದ ಇರಬಹುದು).ಅದಕ್ಕಾಗಿಯೇ ಈ ಕುಟುಂಬ ಹಾಸನ ಮೂಲದ ಹುಡುಗಿಯೊಬ್ಬಳನ್ನು ಈ ವಯೋವೃದ್ದೆಯನ್ನು ನೋಡಿ ಕೊಳ್ಳಲು ನೇಮಿಸಿಕೊಂಡಿದ್ದಾರೆ. ಸಮಯದ ಕೊರತೆ ಇರುವ ಮತ್ತು ಹಣದ ಕೊರತೆ ಇಲ್ಲದವರ ಬದುಕೇ ಹೀಗೆ ಅನ್ನಬೇಕೆ? ತನ್ನ ಓರ್ವ ಮಗ ಅಪರೂಪಕ್ಕೆ ಬಂದರೆ, ಇಲ್ಲೇ ಇರುವ ಮಗ ಮತ್ತು ಸೊಸೆ ದಿನದಲ್ಲಿ ಒಮ್ಮೆ ಅಥವಾ ಮೂರು ದಿನಗಳಿಗೊಮ್ಮೆ ಬಂದು ಭೇಟಿ ನೀಡಿ ಹೋಗುತ್ತಾರೆ. ಇದೊಂದು ಕರಾವಳಿಯ ಹೆಸರಾಂತ ಆಸ್ಪತ್ರೆ ಯಲ್ಲಿ ನಾನು ಕಂಡ ಸತ್ಯ ಸಂಗತಿ. ಈ ಆಸ್ಪತ್ರೆಗೆ ಪ್ರತಿ ತಿಂಗಳು ಬಿಲ್ ಪಾವತಿ ಮಾಡಿದರೆ ಆಯಿತು ಅಷ್ಟೇ. ಸಾಯುವ ವರೆಗೆ  ನೋಡಿಕೊಳ್ಳುತ್ತಾರೆ ಒಂದು ವೇಳೆ ಅವರ ನಿಗಧಿತ ದಿನಕ್ಕಿಂತ ಮುಂಚೆ ಸತ್ತರೆ ಐ. ಸಿ. ಯು ನಲ್ಲಿ ಇಟ್ಟು ಇನ್ನೂ ಒಂದು ತಿಂಗಳು ಹೆಚ್ಚು ಬದುಕಿಸುತ್ತಾರೆ! .ಇದು ಒಂದು ಕುಟುಂಬದ ಮತ್ತು ಒಂದು ಆಸ್ಪತ್ರೆಯ ಕಥೆಯನ್ನು ನಿಮಗೆ ಹೇಳಿದೆ. ಆದರೆ ನಮ್ಮ ಮಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ  ಕಾರ್ಯಚರಿಸುವ ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳು, ಆಯೆರ್ವೇದಿಕ್ ಕ್ಲೀನಿಕ್ ಗಳು ಬೇಕಾದಷ್ಟು ಇವೆ. ಎಲ್ಲೋ ಒಂದು ಕಡೆಯಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಆಸ್ಪತ್ರೆಗಳು ವೃದ್ದಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿವೆಯೇ ಅನ್ನುವ  ಅನುಮಾನ ಬರುತ್ತಿದೆ . ಆಸ್ಪತ್ರೆಗಳಲ್ಲಿ ಈಗ ಅದಕ್ಕಾಗಿಯೇ ವಿಶೇಷ ಕೊಠಡಿಗಳು ಲಭ್ಯ ಇವೆ.
ವಿದ್ಯಾವಂತ ಸಮಾಜದಲ್ಲಿ ಅನುಕರಣೀಯ  ಜೀವನ ಮೌಲ್ಯಗಳು ಕಾಲ ಕಳೆದಂತೆ ನಶಿಸಿ ಹೋಗುತ್ತಿರುವುದು ದುರಂತ. ಹಳ್ಳಿ ಮತ್ತು ಪಟ್ಟಣವನ್ನು ಎಲ್ಲಾ ವಿಚಾರಕ್ಕೂ ಹೋಲಿಕೆ ಮಾಡುವಾಗ ಈ ವಿಚಾರದಲ್ಲೂ ತುಲನೆ ಮಾಡಿದರೆ ತಪ್ಪಾಗಲಾರದು.ವಿದ್ಯಾಭ್ಯಾಸದ ದಾರಿ ಹಿಡಿಯದ ಹಳ್ಳಿಗರು ತನ್ನ ಮಗ, ಮಗಳು, ಮನೆಯ ಸದಸ್ಯರು ಅಥವಾ ನೆಂಟರು ಹಿರಿಯರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಅನೇಕ ಸಂಗತಿಗಳನ್ನು ಗಮನಿಸಬಹುದು.ಈಗ ಬರೇ ಸರಳ ಜೀವನ,ಸಿದ್ದಾಂತಗಳು,ಭಾವನೆಗಳ ಜೊತೆ ಬದುಕುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದುದನ್ನು ಬದಲಾದ ಸಮಾಜ ಎನ್ನಬೇಕೆ?ಆಧುನಿಕ ಬದುಕು ಎನ್ನಬೇಕೆ?ಸ್ಥಿತಿವಂತರ ಹೊಸ ಪರಿಕಲ್ಪನೆ ಎಂದುಕೊಳ್ಳಬೇಕೆ? ಲೆಕ್ಕವಿಲ್ಲದ ಪ್ರಶ್ನೆಗಳು ಹುಟ್ಟುತ್ತಿವೆ.

5 comments:

  1. Replies
    1. ನಿಮ್ಮ ಪ್ರತಿಕ್ರಿಯಗೆ ಅಭಿನಂದನೆಗಳು ಸರ್

      Delete
  2. Really sir.... Very sad...Human values losing day by day...!! Plz Respect the Mankind.....

    ReplyDelete
  3. ಹಣದ ಪ್ರಾಬಲ್ಯದಲ್ಲಿ ತಾಯಿ ಯನ್ನು ಈರೀತಿ ನೋಡಿಕೋಲ್ಲುವ ಮಗನಿದ್ದರೇ,ಆತನಿಗೆ ಸಾಮಾಜ ಅಥವ ಕಾನೊನು ಯೇನು ಮಾಡಲು ಸಾದ್ಯ

    ReplyDelete