ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗ ಮೊದಲ ಬೆಂಚಿನಲ್ಲಿ ಪ್ರವೀಣ ಹೆಸರಿನ ಸ್ನೇಹಿತನೊಬ್ಬ ಲೆಕ್ಕದಲ್ಲಿ ಜಾಣನಾಗಿದ್ದ, ಹೈಸ್ಕೂಲಿನಲ್ಲಿ ಕೊನೆಯ ಬೆಂಚಿನ ಮತ್ತೊಬ್ಬ ಪ್ರವೀಣ ಹೆಸರಿನ ಗೆಳೆಯ ಕಂಠ ಪಾಠದಲ್ಲಿ ಎತ್ತಿದ ಕೈ, ಇನ್ನು ಆಕಾಶವಾಣಿಯ ಉದ್ಘೋಷಕರಾಗಿರುವ ಪ್ರವೀಣ ಹೆಸರಿನ ಮತ್ತೋರ್ವ ಸ್ನೇಹಿತ ಮಾತು,ಕೃತಿ ಎರಡರಲ್ಲೂ ಸೈ ಎನಿಸಿಕೊಂಡವರು . ಈ ಎಲ್ಲಾ ನೆನಪುಗಳ ಮದ್ಯೆ ಮತ್ತೊಬ್ಬ ಪ್ರವೀಣ ಎಂಬ ಹೆಸರಿನ ಹುಡುಗ ದಡ್ಡನಾಗಿ ಸುದ್ದಿಯಾಗುತ್ತಿದ್ದಾನೆ!
ಈ ದಡ್ಡ ಯಾರೆಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಹೌದು, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಕೊಡುಗೆ ರಾಮಣ್ಣ ರೈ ಎಂಬ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಈ ದಡ್ಡ ಪ್ರವೀಣ ಕ್ಲಿಕ್ ಆಗಿದ್ದಾನೆ. ಈ ಹಾಡು ನೋಡಿ...
ಕನ್ನಡ ಚಿತ್ರರಂಗದ ಪ್ರಸಿದ್ಧ ಯುವ ನಿರ್ದೇಶಕ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳಲಿರುವ ಈ ಸಿನೆಮಾ ಗಡಿನಾಡಿನ ಕನ್ನಡ ಸಮಸ್ಯೆಯನ್ನು ಕೇಂದ್ರೀಕರಿಸಿಕೊಂಡು ಪೂರ್ಣವಾಗಿ ಕಾಸರಗೋಡಿನಲ್ಲಿ ಚಿತ್ರೀಕರಣಗೊಂಡ ಮೊದಲ ಸಿನಿಮಾ ಇದಾಗಿದೆ .ಕಾಸರಗೋಡಿನ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ವಿಶ್ವದಲ್ಲೇ ಹಬ್ಬಿಸುವುದಲ್ಲದೆ ಕಾಸರಗೋಡಿನ ಕನ್ನಡವನ್ನು ಉಪಯೋಗಿಸಿರುವುದು ಕಳೆದ ಬಾರಿ ರಿಲೀಸ್ ಆಗಿರುವ ಹಾಡಿನಲ್ಲೇ ಗೊತ್ತಾಗುತ್ತದೆ.
ದಡ್ಡ ದಡ್ಡ ಹಾಡನ್ನು ತ್ರಿಲೋಕ್ ವಿಕ್ರಮ್ ಪ್ರಾಸಬದ್ದವಾಗಿ ಬರೆದಿದ್ದಾರೆ. ಹಕ್ಕಿ ಮುಟ್ಟದ ಕಾಳು ಹೊಡೆದ ಟೆನ್ನಿಸ್ ಬಾಲು.. ಎಂದು ಮುಂದುವರೆಸಿ ಹಾಡು ಬಾ ಕೊಗೀಲೆ ವೈ ಆರ್ ಯು ಸೈಲೆಂಟ್... ಅಂತ ವಿವರಿಸುತ್ತಾರೆ. ಇವೆಲ್ಲವನ್ನೂ ವಾಸುಕಿ ವೈಭವ್ ಸಂಗೀತ ನೀಡಿ ಧ್ವನಿಯನ್ನೂ ಸೇರಿಸಿ ಎಲ್ಲಾ ವಯೋಮಾನದವರೂ ಕೇಳುವ ಹಾಗೆ ಮಾಡಿದ್ದಾರೆ. ನಮ್ಮ ಬಾಲ್ಯದ ದಿನಗಳು, ಹದಿಹರೆಯದ ಹಂತಗಳು, ಶಾಲಾ ಜೀವನದ ಆನಂದದಾಯಕ ಸಂಗತಿಗಳು, ಮತ್ತೆ ನಮ್ಮನ್ನು ಈ ಹಾಡು ಪ್ರಾಥಮಿಕ ಶಾಲೆಯತ್ತ ಕರೆದೊಯ್ಯುವ ಪ್ರಯತ್ನ ಮಾಡಿದಂತಿದೆ. ಈತ ದಡ್ಡ ಆಗಿರುವುದಕ್ಕೆ ನನಗೇನೂ ಬೇಸರವಿಲ್ಲ . ಆತನ ಬಗ್ಗೆ ಹೆಮ್ಮೆ ಅನಿಸುತ್ತದೆ!
ರಿಷಬ್ ಶೆಟ್ಟಿಯವರು ಪ್ರವೀಣನನ್ನು ದಡ್ಡ ಮಾಡಿದ್ದು ಒಳ್ಳೆಯದೇ ಆಯಿತು. ವಿನೂತನ ಶೈಲಿಯಲ್ಲಿ ಸಿನೆಮಾ ಮಾಡುತ್ತಿರುವ ರಿಷಬ್ ಶೆಟ್ಟಿ ಬಳಗಕ್ಕೆ ಬಿಗ್ ಸೆಲ್ಯೂಟ್.