Friday, June 15, 2018

ಮನೆ ಹತ್ತಿರದ ಸಾಹೇಬರೂ ಮತ್ತು ಮೊದಲು ಸವಿದ ಮಟನ್ ಬಿರಿಯಾನಿಯೂ!

"ನಮ್ಮ ಮನೆಯಲ್ಲಿಯೂ ತೊಂದರೆಗಳು ಆದಾಗ ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು"-ವಿ.ಕೆ ಕಡಬ

ಇಂದು ನಾಡಿನೆಲ್ಲೆಡೆ   ಈದು ಉಲ್ ಪಿತರ್  ಹಬ್ಬವನ್ನು  ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಿರುವುದು ಗೊತ್ತಿರುವ ವಿಚಾರ. ಈ  ಪೆರ್ನಾಲ್  ಹಬ್ಬ ಬಂದಾಗಲೆಲ್ಲ  ನನ್ನ ಮನೆ ಸಮೀಪದ  ಸಾಹೇಬರು  ನನಗೆ ಆಗಾಗ ನೆನಪಾಗುತ್ತಿದೆ.  
ನಮ್ಮ ಮನೆಯಿಂದ ಕೂಗಳತೆಯ ದೂರಲ್ಲಿದ್ದ(ಹೆಸರು ಸೂಚಿಸುವುದಿಲ್ಲ)  ಅವರ ಮನೆ ಸಮೀಪದಿಂದಲೇ ಶಾಲೆಗೆ ಹೋಗುತ್ತಿದ್ದೆವು. ನಾನಾಗ ಪ್ರಾಥಮಿಕ ಶಾಲೆಯಲ್ಲಿ ಎರಡನೆ ತರಗತಿಯೋ ಅಥವಾ ಮೂರನೆ ತರಗತಿಯೋ ತಿಳಿಯದು. ಅಂತು ಶಾಲೆಗೆ ಹೋಗುತ್ತಿರುವುದು ಚೆನ್ನಾಗಿ ನೆನಪಿದೆ.   ಸಾಹೇಬರ ಹೆಂಡತಿ ಮತ್ತು ನನ್ನ ದೊಡ್ಡಮ್ಮ ಸ್ನೇಹಿತರು. ನನ್ನ ದೊಡ್ಡಮ್ಮ ಮತ್ತು ಸಾಹೇಬರ ಹೆಂಡತಿ  ಚಿಮಿನಿ ದೀಪದ ಬೆಳಕಿನಲ್ಲಿ ಬೀಡಿಕಟ್ಟಿದವರು.ಸಾಹೇಬರು ಬೀಡಿಯನ್ನು ಬ್ರಾಂಚ್ ಗೆ ತಗೊಂಡು ಹೋಗುತ್ತಿದ್ದರು. ದಿನ ಬಳಕೆಯ ವಸ್ತುಗಳಾದ  ಸಕ್ಕರೆ, ಚಾಹ ಹುಡಿ, ಕೆಂಪು ಮೆಣಸು, ಉಪ್ಪು ಕೂಡ  ಒಂದು ಮನೆಯಿಂದ ಇನ್ನೊಂದು ಮನೆಗೆ ರವಾನೆಯಾಗುತ್ತಿದ್ದದನ್ನು ಆಗ  ಕಣ್ಣರೆ ಕಂಡಿದ್ದೇನೆ. ಸಾಹೇಬರ ಮನೆಯಲ್ಲಿ ಒಂದು ದಿನವೂ ಚಹಾ ತಪ್ಪಿದಲ್ಲ. ಸಾಯಂಕಾಲ ಸಾಹೇಬರ ಹೆಂಡತಿ ದೊಡ್ಡಮ್ಮನ ಮನೆಯಲ್ಲಿ ಅಥವಾ ದೊಡ್ಡಮ ಅವರ ಮನೆಯಲ್ಲಿ ಸಾಯಂಕಾಲದ ಚಹಾಕ್ಕೆ ಪಕ್ಕಾ ಹಾಜರ್!


ಒಮ್ಮೆ ಪೆರ್ನಾಲ್ ಹಬ್ಬ ದ ಸಮಯ ಸಾಹೇಬರ ಮನೆಗೆ ಮದ್ಯಾಹ್ನ ಊಟಕ್ಕೆ ಬರುವಂತೆ ದೊಡ್ಡಮ್ಮನಲ್ಲಿ ಹೇಳಿದ್ದರು. ಶಾಲೆಗೆ ಆ ದಿನ ರಜೆ ಇದ್ದಕಾರಣ ದೊಡ್ಡಮ್ಮ ನಮ್ಮನೂ ಕರೆದುಕೊಂಡು ಹೋದರು. ಮಟನ್  ಬಿರಿಯಾನಿ ಎಂದು ಹೇಳಿ ಎಲ್ಲರಿಗೂ ಕೊಟ್ಟರು. ನನಗೂ ತಟ್ಟೆಯಲ್ಲಿ ಬಡಿಸಿಕೊಟ್ಟಿದ್ದರು.  ಆ ಸಮಯದಲ್ಲಿ ಮಟನ್ ಎಂದರೆ ಏನೋ ಕಲ್ಪಿಸಿಕೊಂಡು ನನಗೆ ಬೇಡವೆಂದು ಹಠ ಹಿಡಿದಿದ್ದೆ. ಕೊನೆಗೆ ಸಾಹೇಬರು ಬಂದು ಅದು ಆಡಿನ ಮಾಂಸವೆಂದು ತಿಳಿ ಹೇಳಿ ನನ್ನ ಜೊತೆ ಊಟಕ್ಕೆ ಕುಳಿತರು. ಇಲ್ಲೇ ನಾನು ಮೊದಲ ಬಾರಿಗೆ ಮಟನ್ ಬಿರಿಯಾನಿ ಸವಿದದ್ದು!

ನಮ್ಮ ದೊಡ್ಡಮ್ಮ ಸೇರಿದಂತೆ ನಮ್ಮ ಮನೆಯಲ್ಲಿಯೂ ಆರೋಗ್ಯದಲ್ಲಿ   ತೊಂದರೆಗಳು ಆದಾಗ , ಕಷ್ಟ ಬಂದಾಗ  ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು.  ಇದೊಂದು ಜಾತೀಮೀರಿದ ಸಂಬಂಧ. ಇನ್ನೂ ವ್ಯಾಖ್ಯಾನಿಸಬಹುದಾದರೆ ಮಾನವ ಪ್ರೀತಿ ಎಂಬುದಷ್ಟೆ ಹೇಳಬಲ್ಲೆ.  ಕಾಲ ಕ್ರಮೇಣ ಅವರು ಜಾಗ ಮಾರಿ ಇನ್ನೊಂದು ಊರಿಗೆ ಹೋಗಿದ್ದಾರೆ.  ಸಾಹೇಬರು ನಮ್ಮಿಂದ ದೂರವಾದರೂ ಅವರ ಪ್ರೀತಿ, ಮತ್ತು ಸೌಹಾರ್ದ ಬದಕು ಇಂದಿಗೂ ಜೀವಂತ. ಈಗಲೂ ಅವರ ಮಕ್ಕಳು ಸಿಕ್ಕಾಗೆಲ್ಲ ಪರಸ್ಪರ ಮಾತನಾಡುತ್ತೇವೆ. 
ನಮಸ್ಕಾರ-ವಿ.ಕೆ ಕಡಬ



No comments:

Post a Comment