"ಆಟಿ ಆನೆಡ್ ಪೋಪುನು ಸೋಣ ಕುದುರೆಡ್ ಪೋಪುನು." ಇದು ನಮ್ಮ ಹಿರಿಯರ ಅನುಭವದ ಮಾತು . ತುಳುವರಲ್ಲಿ ಆಟಿ ಅಂದರೆ "ಆಷಾಢ' .ಈ ತಿಂಗಳಿನಲ್ಲಿ ಮದುವೆ ,ಗೃಹ ಪ್ರವೇಶ ,ಹೊಸಮನೆಯ ತಯಾರಿ,ಹೊಸ ಜಾಗ ಖರೀದಿ ಯಾವುದೇಶುಭ ಕಾರ್ಯಗಳು ನಡೆಯುವುದಿಲ್ಲ .ಎಲ್ಲದಕ್ಕೂ ಆಷಾಢ
ತಿಂಗಳು ಕಳೆಯಲಿ ಎನ್ನುವ ಉತ್ತರ . ಮಳೆಗಾಲಕ್ಕೆ ತಯಾರಿಸಿದ ಹಪ್ಪಳ, "ಸಾಂತಣಿ' ಹಲಸಿನ ತೊಳೆಯನ್ನು, ಮಾವಿನ ಕಾಯಿಗಳನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ಶೇಖರಿಸಿದ "ಉಪ್ಪಡಚ್ಚಿಲ್', "ನೀರ್ಕುಕ್ಕು' ತಿನಸುಗಳನ್ನು ಮಳೆಗಾಳಕ್ಕೆಂದು ತಯಾರಿಸಿ ಇಡುತ್ತಾರೆ . ಅದನ್ನು ಈ ಆಟಿ ತಿಂಗಳಿನಿಂದ ಬಳಕೆ ಮಾಡಲು ಶುರು ಮಾಡುತ್ತಾರೆ. ಅರಶಿನಎಲೆಯ ತಿಂಡಿ, ಹಪ್ಪಳ, ಪಾಯಸ,ಎಳೆಯ ಬಿದಿರಿನ ಉಪ್ಪಿನಕಾಯಿ, ತಜಂಕ್ ಪಲ್ಯ,ಆಟಿ ತಿಂಗಳ ವಿಶೇಷ ತಿನಿಸುಗಳು . ಆಟಿಯಲ್ಲಿ ತಾರಯಿದ ಗಂಜಿ ಮಾಡುವ ಪದ್ಧತಿಯೂ ಇದೆ. ಇದು ತಮಿಳರ ಪೊಂಗತಿಯ ಖಾದ್ಯವೆಂದು ಕೆಲವರ ಅಭಿಪ್ರಾಯ.
ಆಟಿಕೂರುವುದು:-
ಆಷಾಢ ಮಾಸದ ಈ ಸಮಯದಲ್ಲಿ ಹೊಸ ಮದು ಮಗಳಿಗೆ ಸಂತಸದ ಸಮಯವೂ ಹೌದು . ಏಪ್ರಿಲ್ ಮೇ ತಿಂಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣನ್ನು ಆಟಿ ತಿಂಗಳಲ್ಲಿ ತವರು ಮನೆಗೆ ಕರೆತರುವ ಪದ್ಧತಿ ಇದೆಇದಕ್ಕೆ ’ಆಟಿ ಕೂರುವುದು’(ಆಟಿ ಕುಲ್ಲುನಿ)ಎನ್ನುತ್ತಾರೆ .ಆಟಿ ತಿಂಗಳಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡು ಜೊತೆಯಲ್ಲಿ ಇರಬಾರದು . ಬಡತನದ ಬೇಗೆಗೆ ಅದೇ ಸಮಯದಲ್ಲಿ ಮಗು ಹುಟ್ಟಿದರೆ ತೊಂದರೆ ಎಂಬ ಭಾವನೆಯಾಗಿರಬಹುದು ..
ತನ್ನ ತಾಯಿ ಮನೆಯಲ್ಲಿ ವಿಶೇಷ ಬೋಜನವಂತೂ ಇರುವುದು ಗ್ಯಾರಂಟಿ . ಒಂದು ದಿನ ಹುಡುಗನ ಕಡೆಯವರು ನಿಂತು ಬೋಜನ ಸ್ವೀಕರಿ ಹೋಗುವುದು ಹಾಗೆಯೇ ಹಾಗೆಯೇ ಶ್ರಾವಣ ಮಾಸದಲ್ಲಿ ಮದುಮಗಳನ್ನು ತನ್ನ ಗಂಡನ ಮನೆಗೆ ಕರೆದುಕೊಂಡು
ಹೋಗುವ ಸಮಯದಲ್ಲಿ ಅಲ್ಲಿಯು ಹುಡುಗಿಯ ಕಡೆಯವರು ಒಂದು ದಿನ ನಿಂತು ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವುದನ್ನು ನಾನು ಗಮನಿಸಿದ್ದೇನೆ.
ಆಟಿ
ಅಮವಾಸ್ಯೆ:-
ಆಟಿ
ಅಮವಾಸ್ಯೆ ದಿನ
ಹಾಲೆಮರ(ಸಪ್ತಪರ್ಣಮರ)ದ ತೊಗಟೆಯನ್ನು ಜಜ್ಜಿ ಅದರ ರಸ ಕುಡಿಯುವ ಸಂಪ್ರದಾಯ ಕರಾವಳಿಯಲ್ಲಿ ಈಗಲೂ ಇದೆ. ಈ ಮರದಲ್ಲಿ ಆಟಿ ತಿಂಗಳ ಹದಿನೆಂಟನೇ ದಿನ (ಅಮವಾಸ್ಯೆದ ದಿನ) ಹದಿನೆಂಟು ಬಗೆಯ ಔಷಧಿಯ ಗುಣ ಸೇರುತ್ತವೆ ಎಂಬುದನ್ನು ಹಿರಿಯರು ಒತ್ತಿ ಹೇಳುತ್ತಾರೆ . ಈ ಮರದ ತೊಗಟೆಯನ್ನು ಮುಂಜಾನೆ
ಬಿಸಿಲ ಕಿರಣ ಬೀಳುವ ಮೊದಲು ಸಂಗ್ರಹಿಸಬೇಕು. ಸೂರ್ಯನ ಬೆಳಕು ಬಿದ್ದರೆ ಔಷಧೀಯ ಗುಣ ನಾಶವಾಗುತ್ತದೆ ಎಂಬುದು ಹಿರಿಯರ ಬಲವಾದ ನಂಬಿಕೆ. ಇದರ ರಸ ಕಹಿಯಾಗಿದ್ದು, ದೇಹದಲ್ಲಿರುವ ರೋಗಾಣುಗಳನ್ನು ಇದು ನಾಶ ಮಾಡುತ್ತದೆ. ಹಾಗಾಗಿ ಆಟಿ ಹದಿನೆಂಟನೇ ದಿನ ತುಳುವರಿಗೆ
ವಿಶೇಷ ದಿನ.
ಕಿಸ್ಕಾರದ(ಕೇಪುಳ )ಹೂವು ಯಾರ ಕಣ್ಣಿಗೂ ಬೀಳುವುದಿಲ್ಲ .ಅಂದರೆ ಆಗುವುದಿಲ್ಲ . ನಮ್ಮ ತುಳು ಜನರು ಕಿಸ್ಕಾರ ಹೂವು ಕೂಡ ತನ್ನ ತಾಯಿ ಮನೆಗೆ ಹೋಗುತ್ತದೆ ಎನ್ನುವ ನಂಬಿಕೆಯನ್ನು ಈಗಲೂ ಉಳಿಸಿಕೊಂಡು ಬಂದಿದ್ದಾರೆ.
ಆಧುನೀಕತೆ ಬೆಳೆಯುತ್ತಿದ್ದಂತೆ ತಲತಲಾಂತರಗಳಿಂದ ಬೆಳೆದು ಬಂದ ಆಚಾರ-ವಿಚಾರಗಳು ಮರೆಯಾಗುತ್ತಿದೆಯೋ ಎಂಬ ಭಯ ಇಂದಿನ ದಿನಗಳಲ್ಲಿ ಕಾಡುತ್ತಿದೆ. ಹಳ್ಳಿಯಲ್ಲಿ ಬೇಸಾಯ ಮಾಡಿ ಜೀವನ ನಡೆಸುತ್ತಿದ್ದ ಜನಕ್ಕೆ ಈಗ ದುಡಿಯಲು ಶಕ್ತಿ ಇಲ್ಲ .ಹೊಸ ತಲೆಮಾರಿನ ಯುವಕ ಯುವತಿಯರು ನಗರಗಳತ್ತ
ಮುಖಮಾಡಿ ಆಧುನಿಕ ಜೀವನ ಶೈಲಿಯತ್ತ ಸಾಗಿದ್ದಾರೆ . ಆಟಿ
ಶುರುವಾದರೂ ಗದ್ದೆ ಕೆಲಸ ಇನ್ನೂ
ಸಮರ್ಪಕವಾಗಿ ಸಾಗಿಲ್ಲ. ಆದರೂ ಕೆಲವೊಂದು ಸಂಘ ಸಂಸ್ಥೆಗಳು ಆಟಿ ಸಂಪ್ರದಾಯಗಳನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ .ಮತ್ತೊಂದು ಸಂಗತಿಯೆಂದರೆ ,ಆಟಿಯ ತಿನಸಿನಲ್ಲಿ ಕೋಳಿ ಪದಾರ್ಥ ಬಂದಿದೆ. ಇದೆಷ್ಟು
ಸರಿ? ಅಬ್ಬರದ ಆಚರಣೆಯಿಂದ ಕೂಡಿದ ಕಾರಣಕ್ಕೆ ಆಡಂಬರ ಎಂಬ ಮಾತು ಕೇಳಿ ಬರುತ್ತಿದೆ . ಈಗ ಎಲ್ಲ ಕಡೆಗಳಲ್ಲಿ ಆಷಾಢ ಮಾಸದ ಕಾರ್ಯಕ್ರಮಗಳು ಬಹಳ ಸಂಭ್ರಮದಿಂದ ನಡೆಯುವಾಗ ಕಷ್ಟದ ತಿಂಗಳು ಎಂದು ಕರೆಯುವು ದಾದರು ಹೇಗೆ ? ಕರಾವಳಿಯ ವಿಶೇಷ ತಿಂಗಳಾದ ಆಟಿ ಇಂತಹ ಹಲವಾರು ವಿಶೇಷತೆಗಳಿಂದ ವಿಶಿಷ್ಟವಾಗಿದೆ. ಇಂತಹ ಸಂಪ್ರದಾಯ ಬದಲಾದ ಈ ಕಾಲಘಟ್ಟದಲ್ಲಿ
ಬದಲಾದರೂ,ಕಾಲದ ಜೊತೆ ಹೊಂದಿಕೊಂಡು ನಾವು
ನೈಜತೆಯೆನ್ನು ಉಳಿಸಿಕೊಂಡು ಮುಂದುವರಿಯಬೇಕಿದೆ . ಆಟಿಯ ವಿಶೇಷ ತಿಂಡಿತಿನಿಸುಗಳನ್ನು ಸವಿಯಲು ನಾವೆಲ್ಲಾ ತಯರಾಗೋಣ.
No comments:
Post a Comment